Monday, July 16, 2012

Kathopanishad in Kannada Chapter-02 Canto-01 Shloka 01-02


ಅಧ್ಯಾಯ-೨

ವಲ್ಲೀ-೧

ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಸ್ತಸ್ಮಾತ್ಪರಾಙ್ಪಶ್ಯತಿ ನಾಂತರಾತ್ಮನ್
ಕಶ್ಚಿದ್ಧೀರಃ ಪ್ರತ್ಯಗಾತ್ಮಾನಮೈಕ್ಷದಾವೃತ್ತಚಕ್ಷುರಮೃತತ್ವಮಿಚ್ಛನ್     

ಸ್ವತಂತ್ರವಾಗಿ/ತನ್ನಿಚ್ಛೆಯಂತೆ ತಾನಿರುವ ಭಗವಂತ(ಸ್ವಯಂಭೂಃ), ಮೊದಲು ಇಂದ್ರಿಯಗಳನ್ನು ಸೃಷ್ಟಿ ಮಾಡಿದನಂತೆ. ಹೀಗೆ ಸೃಷ್ಟಿ ಮಾಡುವಾಗ ಆತ ಬಹಳ ತಿರಸ್ಕಾರದಿಂದ ಬಹಿರ್ಮುಖವಾಗಿ ಸೃಷ್ಟಿಸಿದನಂತೆ. ಈ ಕಾರಣದಿಂದಾಗಿ ನಮ್ಮ ಯಾವ ಇಂದ್ರಿಯಗಳೂ ಅಂತರಂಗದ ಸತ್ಯವನ್ನು ಗ್ರಹಿಸಲಾರದಾದವು. ಭಗವಂತ ಇಂದ್ರಿಯಗಳನ್ನು ಈ ರೀತಿ ಸೃಷ್ಟಿ ಮಾಡಲು ಕಾರಣವೇನೆಂದರೆ: ಯಾರಿಗೆ ನಿಜವಾದ ಅರ್ಹತೆ ಇದೆಯೋ ಅವರಷ್ಟೇ ಅಂತರಂಗವನ್ನು ತಿಳಿಯಬೇಕು ಎನ್ನುವುದು. ಧೀರನಾದವನಿಗೆ ಅಂತರಂಗವನ್ನು ಕಾಣುವ ಅವಕಾಶವನ್ನು ಭಗವಂತ ಕಲ್ಪಿಸಿದ್ದಾನೆ. ಈ ಹಿಂದೆ ಹೇಳಿದಂತೆ ಭಗವಂತನತ್ತ ಪಯಣ ಮಾಡುವ ಮಾರ್ಗ ಬಹಳ ದುರ್ಗಮ. ಅದು ಕತ್ತಿಯ ಅಲುಗಿನ ನಡೆ. ಅರಿವಿನ ಹಸಿವುಳ್ಳವರಲ್ಲಿ, ಅಧಮ್ಯ ಬಯಕೆಯುಳ್ಳವರಲ್ಲಿ, ಏನೇ ಬರಲಿ ಭಗವಂತನನ್ನು ಸೇರಿಯೇ ಸೇರುತ್ತೇನೆ ಎನ್ನುವ ಛಲ ಉಳ್ಳವರಲ್ಲಿ ಯಾರೋ ಒಬ್ಬ(ಧೀರ) ಹಠದಿಂದ ಮುಂದುವರಿದು ತನ್ನ ಅಂತರಾತ್ಮನಾದ ಭಗವಂತನನ್ನು ಕಾಣುತ್ತಾನೆ.
ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮ ಹೊರಗಣ್ಣನ್ನು ಮುಚ್ಚಿ ನಮ್ಮ ಒಳಗಣ್ಣನ್ನು ತೆರೆಯಬೇಕು. ಇಲ್ಲಿ ಮರಳಿ ಹುಟ್ಟಬಾರದು ಎನ್ನುವ ಅಧಮ್ಯ ಬಯಕೆ ಬಹಳ ಮುಖ್ಯ. ಜ್ಞಾನದಿಂದ ಬರುವ ಸ್ವರೂಪಾನಂದವನ್ನು ಬಯಸುವವನು ಅಂತರ್ಮುಖನಾಗಿ ಕುಳಿತು ತನ್ನೊಳಗಿರುವ ಭಗವಂತನನ್ನು ಕಾಣಬಲ್ಲ. ಈ ಶ್ಲೋಕದಲ್ಲಿ ಮುಖ್ಯವಾಗಿ ಮೂರು ವಿಚಾರಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. (೧) ನಮ್ಮ ಬಾಹ್ಯ ಇಂದ್ರಿಯಗಳಿಂದ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ವ್ಯರ್ಥ. (೨) ಭಗವಂತನನ್ನು ಕಾಣಬೇಕಾದರೆ ಹೊರಗಿನ ಇಂದ್ರಿಯಗಳನ್ನು ಮುಚ್ಚಿ ಒಳಗಿನ ಇಂದ್ರಿಯವನ್ನು  ತೆರೆಯಬೇಕು. (೩) ಜ್ಞಾನದ ಹಸಿವು ಮತ್ತು ಸಾಧನೆಯ ಹಾದಿಯಲ್ಲಿ ಯಾವುದೇ ವಿಘ್ನ ಬಂದರೂ, ವಿಚಲಿತನಾಗದೇ ಮುನ್ನೆಡೆಯುವ ಧೈರ್ಯ ನಮ್ಮಲ್ಲಿರಬೇಕು.
ಇಲ್ಲಿ ನಮಗೊಂದು ಪ್ರಶ್ನೆ ಬರಬಹುದು. ಸಾಧನೆಯ ಹಾದಿಯಲ್ಲಿ ಅನೇಕ ವಿಘ್ನಗಳು ಏಕೆ ಬರುತ್ತವೆ ಎಂದು. ಸಾಧನೆಯ ಹಾದಿಯಲ್ಲಿ ಸಾಮಾನ್ಯವಾಗಿ ವಿಘ್ನ ತಂದೊಡ್ಡುವವರು ದೇವತೆಗಳು! ಇದು ಯಾವುದೋ ಹಗೆತನದಿಂದಲ್ಲ,  ಕೇವಲ ನಮ್ಮ ಪರೀಕ್ಷೆಗಾಗಿ ಅವರು ತಂದೊಡ್ಡುವ ಸವಾಲುಗಳಿವು. ನಾವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದೆ ಸಾಗಬೇಕು ಎನ್ನುವುದು ಅವರ ಹಾರೈಕೆಯಾಗಿರುತ್ತದೆ. ಇದಕ್ಕಾಗಿ ನಾವು ಅಧ್ಯಾತ್ಮ ಸಾಧನೆಯಲ್ಲಿ ಎಂದೂ ಧೈರ್ಯಗೆಡಬಾರದು. ಇದಕ್ಕೆ ಉತ್ತಮ ಉದಾಹರಣೆ ಧ್ರುವ. ಐದು ವರ್ಷದ ಮಗು ಭಗವಂತನನ್ನು ಕಾಣಬೇಕು ಎನ್ನುವ ಅಧಮ್ಯ ಬಯಕೆಯಿಂದ ಕಾಡಿನಲ್ಲಿ ತಪಸ್ಸನ್ನಾಚರಿಸುತ್ತಿರುವಾಗ ಆತನಿಗೆ ಬ್ರಹ್ಮರಾಕ್ಷಸರಂತಹ ಭೀಕರ ದೃಶ್ಯ ಎದುರಾಗುತ್ತದೆ. ಆದರೆ ಆತ ವಿಚಲಿತನಾಗಲಿಲ್ಲ. ಧೈರ್ಯದಿಂದ ಹಠ ಹಿಡಿದು ಕುಳಿತಿದ್ದರಿಂದ ಆತನಿಗೆ  ಭಗವಂತನ ದರ್ಶನವಾಯಿತು. ಹೀಗೆ ನಮ್ಮ ಮುಂದೆ ಎಂತಹ ಪರೀಕ್ಷೆ ಎದುರಾದರೂ ಕೂಡಾ,  ನಾವು ಕಂಗೆಡದೆ ಮುಂದೆ ಸಾಗಿದರೆ ಆಗ ಭಗವಂತನ ದರ್ಶನ ಸಾಧ್ಯ.         

ಪರಾಚಃ ಕಾಮಾನನುಯಂತಿ ಬಾಲಾ  ಸ್ತೇ ಮೃತ್ಯೋರ್ಯಂತಿ ವಿತತಸ್ಯ ಪಾಶಮ್
ಅಥ ಧೀರಾ ಅಮೃತತ್ವಂ ವಿದಿತ್ವಾ ಧ್ರುವಮಧ್ರುವೇಷ್ವಿಹ ನ ಪ್ರಾರ್ಥಯಂತೇ

ಸಾಧನೆಯ ಹಾದಿಯಲ್ಲಿ ಬಾಲಿಷರು ಬಹಿರ್ಮುಖಿಗಳಾಗಿ ದಾರಿ ತಪ್ಪುತ್ತಾರೆ.  ವಿಶ್ವಾಮಿತ್ರರಂತಹ ಮಹಾಮುನಿಗಳೂ ಇದಕ್ಕೆ ಹೊರತಲ್ಲ. ಸಾಮಾನ್ಯವಾಗಿ ಬಾಲಕರು ಬಾಹ್ಯ ಕಾಮನೆಯ ಬೆನ್ನು ಹತ್ತಿ ಹೋಗುವುದು ಸಹಜ. ಆದರೆ ನಚಿಕೇತನನ್ನು ಯಾವ ಪ್ರಲೋಭನೆಯೂ ಕಾಡಲಿಲ್ಲ. ಕೇವಲ ಬಾಹ್ಯ ಕಾಮನೆಯ ಬೆನ್ನುಹತ್ತುವ ಮಂದಿ ಸುಲಭವಾಗಿ ಮೃತ್ಯುವಿನ ಪಾಶಕ್ಕೆ ಬಲಿಯಾಗುತ್ತಾರೆ. ಅವರೆಂದೂ ಅಮೃತತ್ವವನ್ನು ಪಡೆಯುವುದಿಲ್ಲ.  ಧೀರನಾದವನು ಚಂಚಲವಾದ ಈ ಪ್ರಪಂಚದಲ್ಲಿದ್ದುಕೊಂಡೇ, ಅಸ್ಥಿರ, ನಶ್ವರ ಮತ್ತು ಅಶಾಶ್ವತವಾದ ಬಾಹ್ಯ ವಿಷಯಗಳಿಗೆ ಬಲಿಬೀಳದೇ, ಧೈರ್ಯದಿಂದ ಮುನ್ನೆಡೆಯುತ್ತಾನೆ.
[ಈ ವಲ್ಲಿಯಲ್ಲಿನ ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ, ಅರ್ಥಾನುಸಂಧಾನಕ್ಕೆ ಇಲ್ಲಿ ಹೆಚ್ಚು ಅನ್ವಿತವಾಗುವ, ಈ ಅಧ್ಯಾಯದ ಎರಡನೇ ವಲ್ಲಿಯಲ್ಲಿ ಬರುವ ಮೂರು ಮಂತ್ರಗಳ ವಿಶ್ಲೇಷಣೆ ಈ ಕೆಳಗೆ ನೀಡಲಾಗಿದೆ. ಮೊದಲು ಪ್ರತಿಜ್ಞೆ ಮಾಡಿ ಆ ನಂತರ ಉಪದೇಶ ಮಾಡುವುದು ಸಾಮಾನ್ಯವಾದುದರಿಂದ, ಈ ಮೂರು ಶ್ಲೋಕಗಳ ವಿಶ್ಲೇಷಣೆಯನ್ನು ಇಲ್ಲಿ ನೀಡಲಾಗಿದೆ.]

ಹಂತ ತ ಇದಂ ಪ್ರವಕ್ಷ್ಯಾಮಿ ಗುಹ್ಯಂ ಬ್ರಹ್ಮ ಸನಾತನಮ್
ಯಥಾ ಚ ಮರಣಂ ಪ್ರಾಪ್ಯ ಆತ್ಮಾ ಭವತಿ ಗೌತಮ                         ೨-೨-೬

ಯಮ ನಚಿಕೇತನ ಅಧ್ಯಾತ್ಮ ಆಸಕ್ತಿಯನ್ನು ಮೆಚ್ಚಿ ಹೇಳುತ್ತಾನೆ: “ ಈ ಚಿಕ್ಕ ವಯಸ್ಸಿನಲ್ಲಿ ಅಧ್ಯಾತ್ಮವೇ ಬೇಕು ಎಂದು ನೀನು ಬಯಸುತ್ತಿರುವುದು ಬಹಳ ಆಶ್ಚರ್ಯ(ಹಂತ). ನಿನ್ನಲ್ಲಿ ಇಷ್ಟೊಂದು ಆಸಕ್ತಿ ಇರುವುದರಿಂದ, ಪರಮ ಗುಹ್ಯವೂ, ಸನಾತನವೂ ಆದ ಈ ವಿದ್ಯೆಯನ್ನು ನಿನಗೆ ಪ್ರವಚನ ಮಾಡುತ್ತೇನೆ” ಎಂದು.  ಇಲ್ಲಿ ‘ಪ್ರವಕ್ಷ್ಯಾಮಿ’ ಎನ್ನುವ ಪದ ಬಳಕೆಯಾಗಿದೆ. ಪ್ರವಕ್ಷ್ಯಾಮಿ ಎಂದರೆ ಪ್ರವಚನ ಮಾಡುವುದು. ‘ಪ್ರವಚನ ಎನ್ನುವ ಪದಕ್ಕೆ ಬಹಳ ಹಿರಿದಾದ ಅರ್ಥವಿದೆ. ಸರ್ವೋತ್ಕೃಷ್ಟನಾದ ಭಗವಂತನ ಬಗೆಗಿನ ಮಾತು –ಪ್ರವಚನ(ಪ್ರಕೃಷ್ಟಂ ವಚನಮ್); ಪ್ರಾಚೀನರು ಕಂಡ ಭಗವಂತನ ಬಗೆಗಿನ ಮಂತ್ರಗಳನ್ನು ಇಂದಿನ ಜನರಿಗೆ ಅರ್ಥವಾಗುವಂತೆ ಹೇಳುವುದು-ಪ್ರವಚನ(ಪ್ರಥನಂ ವಚನಮ್).  “ಸರ್ವಕಾಲದಲ್ಲೂ ಇರತಕ್ಕಂತಹ, ಸರ್ವನಿಯಾಮಕನಾದ, ಎಲ್ಲಕ್ಕಿಂತಲೂ ಹಿರಿದಾದ, ಗುಣಪೂರ್ಣ ಭಗವಂತನ ಬಗೆಗೆ ಹೇಳುತ್ತೇನೆ” ಎನ್ನುತ್ತಾನೆ ಯಮ.
ಮೊದಲ ಅಧ್ಯಾಯದಲ್ಲಿ ನಾವು ಈಗಾಗಲೇ ನೋಡಿದಂತೆ  'ಜೀವ ಕೊನೆಯದಾಗಿ ಸತ್ತ ಮೇಲೆ ಏನಾಗುತ್ತಾನೆ, ಮೋಕ್ಷದಲ್ಲಿ ಜೀವನ ಸ್ಥಿತಿ ಏನು' ಎಂದು ತಿಳಿಯುವ ಜಿಜ್ಞಾಸೆಯನ್ನು ನಚಿಕೇತ  ಯಮನ ಮುಂದೆ ಇಟ್ಟಿದ್ದ.  ಆತನ ಪ್ರಶ್ನೆಗೆ ಉತ್ತರ ರೂಪವಾಗಿ ಯಮ ಹೇಳುತ್ತಾನೆ: “ ಒಬ್ಬ ಮನುಷ್ಯ ಸತ್ತ ನಂತರ ಏನಾಗುತ್ತಾನೆ, ಸಂಸಾರ ಚಕ್ರದಲ್ಲಿ ಸುತ್ತಿ ಕೊನೇಯ ಸಾವು ಬಂದಾಗ  ಮೋಕ್ಷದಲ್ಲಿ ಜೀವನ ಸ್ಥಿತಿ ಏನು ಎನ್ನುವುದನ್ನು ನಿನಗೆ ವಿವರಿಸುತ್ತೇನೆ” ಎಂದು.
ಈ ಶ್ಲೋಕದಲ್ಲಿ ಯಮ ನಚಿಕೇತನನ್ನು ‘ಗೌತಮನೇ’ ಎಂದು ಸಂಬೋಧಿಸಿದ್ದಾನೆ.  ನಚಿಕೇತ ಗೌತಮ ಗೋತ್ರದವನಾದ್ದರಿಂದ ಈ ಸಂಬೋಧನೆ. “ಒಳ್ಳೆಯ ಋಷಿ ಪರಂಪರೆಯಲ್ಲಿ ಬಂದಿರುವ ನಿನಗೆ ಅನುವಂಶೀಯವಾಗಿ ವಿಷಯವನ್ನು ಗ್ರಹಣ ಮಾಡುವ ಶಕ್ತಿ ಇದೆ. ಹಾಗಾಗಿ ನಿನಗೆ ಭಗವಂತನ ಬಗೆಗೆ ಹಾಗೂ ಸತ್ತ ನಂತರ ಜೀವದ ಗತಿ ಏನು ಎನ್ನುವುದನ್ನು ವಿವರಿಸುತ್ತೇನೆ” ಎನ್ನುವುದು ಈ ಸಂಬೋಧನೆಯ ಹಿಂದಿರುವ ಧ್ವನಿ.     

ಯೋನಿಮನ್ಯೇ ಪ್ರಪದ್ಯಂತೇ ಶರೀರತ್ವಾಯ ದೇಹಿನಃ
ಸ್ಥಾಣುಮನ್ಯೇಽನುಸಂಯಂತಿ ಯಥಾಕರ್ಮ ಯಥಾಶ್ರುತಮ್            ೨-೨-೭

ಸತ್ತಮೇಲೆ ಜೀವ ತನ್ನ ಪುಣ್ಯ-ಪಾಪ ಫಲಕ್ಕನುಗುಣವಾಗಿ ಪುಣ್ಯಲೋಕದಲ್ಲೋ  ಅಥವಾ ನರಕ ಲೋಕದಲ್ಲೋ ತಾನು ಪಡೆದ ಫಲವನ್ನು ಅನುಭವಿಸುತ್ತಾನೆ. ಆನಂತರ ಪರ್ಜನ್ಯ ಲೋಕದಿಂದ ವಾತಾವರಣವನ್ನು ಸೇರಿ ಅಲ್ಲಿಂದ ಮಳೆಯೊಂದಿಗೆ ಭೂಮಿಗಿಳಿದು, ಭೂಮಿಯಲ್ಲಿ ಮರಳಿ ಹುಟ್ಟುತ್ತಾನೆ. ಈ ರೀತಿ ಹುಟ್ಟಿನಲ್ಲಿ ಮುಖ್ಯವಾಗಿ ಎರಡು ಬಗೆ. ಒಂದು ನಾವು ತಿನ್ನುವ ಗಿಡ ಬಳ್ಳಿಯಲ್ಲಿ ಸೇರಿಕೊಂಡು ಅದರ ಮೂಲಕ ಗಂಡಿನ ದೇಹವನ್ನು ಪ್ರವೇಶಿಸಿ, ಅಲ್ಲಿಂದ ಹೆಣ್ಣಿನ ಗರ್ಭವನ್ನು ಸೇರಿ, ಅಲ್ಲಿ ದೇಹವನ್ನು ಪಡೆದು ಹುಟ್ಟುವುದು; ಇನ್ನೊಂದು ನೇರವಾಗಿ ಗಿಡ ಬಳ್ಳಿಯಾಗಿ ಹುಟ್ಟುವುದು. ಅವರವರ ಕರ್ಮ ಮತ್ತು ಜ್ಞಾನಕ್ಕನುಗುಣವಾಗಿ ಅವರವರ ಜನನ ನಿರ್ಧಾರವಾಗುತ್ತದೆ. ಕೆಲವೊಮ್ಮೆ ಜೀವ ತಾಯಿಯ ಗರ್ಭವನ್ನು ಸೇರಲು ಅನೇಕ ಯುಗಗಳನ್ನೇ ಕಾಯಬೇಕಾಗಬಹುದು. ನೂರಾರು ಜೀವಾಣುಗಳಲ್ಲಿ ಕೇವಲ ಒಂದು ಜೀವಾಣು ಮಾತ್ರ ತಾಯಿಯ ಗರ್ಭವನ್ನು ಸೇರುವುದರಲ್ಲಿ ಯಶಸ್ವಿಯಾಗುತ್ತದೆ ಹಾಗೂ ಉಳಿದ ಜೀವಾಣುಗಳು ಮರಳಿ ಪ್ರಯತ್ನಿಸಬೇಕಾಗುತ್ತದೆ. ಎಲ್ಲವೂ ನಮ್ಮ ಕರ್ಮಫಲಕ್ಕನುಗುಣವಾಗಿಯೇ ನಡೆಯುತ್ತದೆ.      

No comments:

Post a Comment