Tuesday, June 26, 2012

Kathopanishad in Kannada Chapter-01 Canto-02 Shloka 21-25


             ಆಸೀನೋ ದೂರಂ ವ್ರಜತಿ ಶಯಾನೋ ಯಾತಿ ಸರ್ವತಃ
             ಕಸ್ತಂ ಮದಾಮದಂ ದೇವಂ ಮದನ್ಯೋ ಜ್ಞಾತುಮರ್ಹತಿ ೨೧

ಭಗವಂತ ಎಲ್ಲಿಯೋ ಒಂದು ಕಡೆ ಇರುತ್ತಾನೆ. ಆದರೆ ಅಲ್ಲಿರುವುದು ಮಾತ್ರವಲ್ಲ, ಅಲ್ಲಿಂದ ದೂರ ಹೋದರೆ ಅಲ್ಲಿಯೂ ಇರುತ್ತಾನೆ. ಸ್ಥೂಲವಾಗಿ ನೋಡಿದರೆ ಆಕಾಶದಂತೆ. ಮೂಲರೂಪದಲ್ಲಿ ನಿತ್ಯ ದೃಷ್ಟನಾಗಿ ವೈಕುಂಠಾದಿ ಸ್ಥಾನಗಳಲ್ಲಿ ಆಸೀನ. ಆದರೆ ಅಲ್ಲಿದ್ದುಕೊಂಡೇ ಇನ್ನೊಂದು ಕಡೆ ಹೋಗುತ್ತಾನೆ ಭಗವಂತ. ಇದು ಭಗವಂತನ ಸರ್ವಶಕ್ತ, ಮತ್ತು ಸರ್ವವ್ಯಾಪ್ತ ಗುಣವನ್ನು ಹೇಳುತ್ತದೆ.[ಇಲ್ಲಿ ಆಕಾಶ ಕೇವಲ ಸ್ಥೂಲ ದೃಷ್ಟಾಂತ ಅಷ್ಟೇ. ಆಕಾಶ ಕೇವಲ ಸರ್ವವ್ಯಾಪ್ತ ಆದರೆ ಸರ್ವಸಮರ್ಥವಲ್ಲ]. ನಮ್ಮ ಹೃದಯಗುಹೆಯೊಳಗೆ ಅಣೋರಣೀಯನಾಗಿ ಮಲಗಿರುವ ಭಗವಂತ, ಮಹತೊಮಯನಾಗಿ ಎಲ್ಲೆಡೆ ತುಂಬಿದ್ದಾನೆ. ಜೀವಜಾತಗಳಿಗೆ ಜೀವಸ್ವಭಾವದ ಯೋಗ್ಯತೆಗೆ ತಕ್ಕಂತೆ ಆನಂದ ಮತ್ತು ದುಃಖ ಕೊಡುವವನು ಭಗವಂತ. ಇಂತಹ ಭಗವಂತನ ಈ ವಿಶೇಷ ಗುಣವನ್ನು  ನನ್ನಿಂದ ಕೆಳಗಿರುವ ಯಾವ ಮಾನವನೂ ತಿಳಿದಿರಲು ಸಾಧ್ಯವಿಲ್ಲ. [ಇಲ್ಲಿ ಬಂದಿರುವ ‘ಕಃ’ ಪದ ಬ್ರಹ್ಮ, ವಾಯುವನ್ನು ಸೂಚಿಸುತ್ತದೆ.  “ನನ್ನಿಂದ ಎತ್ತರದಲ್ಲಿರುವ ದೇವತೆಗಳಷ್ಟೇ ತಿಳಿದಿರಲು ಸಾಧ್ಯ” ಎನ್ನುವುದು ಇಲ್ಲಿ ಕಾಣುವ ಇನ್ನೊಂದು ಅರ್ಥ]. “ನಿನಗೆ ಈ ಜ್ಞಾನವನ್ನು ತಿಳಿಯುವ ಭಾಗ್ಯವಿತ್ತು ಆದ್ದರಿಂದ ನೀನು ನನ್ನ ಬಳಿ ಬಂದೆ. ನೀನು ಭಾಗ್ಯಶಾಲಿ. ಮನುಷ್ಯ ಲೋಕದಲ್ಲಿ ಇದಕ್ಕಿಂತ ಹೆಚ್ಚಿನ ರಹಸ್ಯವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಸಾಮಾನ್ಯವಾಗಿ ಯಾರಿಗೂ ಅರಿವಾಗದ ರಹಸ್ಯವನ್ನು ನಾನು ತಿಳಿದುಕೊಂಡೆ ಹಾಗೂ ನಿನಗೆ ಕೊಟ್ಟೆ. ಮನುಷ್ಯಲೋಕದಲ್ಲಿ  ಇಂತಹ ಅರಿವನ್ನು ಮೊದಲು ತಿಳಿದವನು ನೀನು, ಕೊಟ್ಟವನು ನಾನು ಎನ್ನುತ್ತಾನೆ ಯಮ.

             ಅಶರೀರಂ ಶರೀರೇಷ್ವನವಸ್ಥೇಷ್ವವಸ್ಥಿತಮ್
             ಮಹಾಂತಂ ವಿಭುಮಾತ್ಮಾನಂ ಮತ್ವಾ ಧೀರೋ ನ ಶೋಚತಿ ೨೨

ಎಲ್ಲರನ್ನೂ ಕಾಡುವ ಒಂದು ಸರ್ವೇ ಸಾಮಾನ್ಯವಾದ ಪ್ರಶ್ನೆ ಎಂದರೆ: ದೇವರಿಗೆ ಶರೀರ/ಆಕಾರವಿದೆಯೋ ಎನ್ನುವುದು. ಈ  ಶ್ಲೋಕ ನಮ್ಮ  ಪ್ರಶ್ನೆಗೆ ಉತ್ತರ ರೂಪದಲ್ಲಿದೆ:

ದೇವರಿಗೆ ಶರೀರವಿಲ್ಲ, ಆಕಾರವಿಲ್ಲ. ಆದರೆ ಆತ ಎಲ್ಲರ ಶರೀರದೊಳಗೂ ಇದ್ದಾನೆ. ನಮಗೆ ಒಂದು ಶರೀರವಾದರೆ –ಎಲ್ಲಾ ಶರೀರವೂ ಅವನ ಶರೀರ! ಈ ರೀತಿ ಎಲ್ಲಾ ಶರೀರದಲ್ಲೂ ಇರುವ ಭಗವಂತನಿಗೆ ಆ ಶರೀರದ ಲೋಪವಾಗಲಿ, ದುಃಖಾನುಭವವಾಗಲಿ, ಅಭಿಮಾನವಾಗಲೀ ಇಲ್ಲ. ಆದ್ದರಿಂದ ಭಗವಂತ ಅಶರೀರ. ನಮ್ಮ ಶರೀರಕ್ಕೆ ನೆಲೆ ಇಲ್ಲ. ಒಂದು ದಿನ ಬಿದ್ದು ಹೋಗುವ ಈ ಶರೀರ ಗಟ್ಟಿಯಾಗಿ ನಿಲ್ಲುವಂತಹುದಲ್ಲ. ಇಂತಹ ನೆಲೆ ಇಲ್ಲದ ಶರೀರದಲ್ಲಿ ನೆಲೆಸಿ, ಅದಕ್ಕೊಂದು ನೆಲೆ ಕೊಟ್ಟು, ನಿಲ್ಲಲಾಗದ ದೇಹವನ್ನು ನಿಲ್ಲುವಂತೆ ಮಾಡಿ, ಚಲಿಸಲಾಗದ ದೇಹವನ್ನು ಚಲಿಸುವಂತೆ ಮಾಡುವವ ಆ ಭಗವಂತ. ಇಂತಹ ಭಗವಂತ ದೇಹದಿಂದ ಹೊರಟು ಹೋದಾಗ ಈ ಶರೀರ ಬಿದ್ದು ಹೋಗುತ್ತದೆ.
ಶರೀರದಲ್ಲಿ ವಾಸಿಸುವ ಭಗವಂತ ಶರೀರದ ಪರಿಮಿತಿಯಲ್ಲಿಲ್ಲ. ಅವನು ‘ಮಹಾಂತ’. ದೇಹದೊಳಗಿರುವ ಭಗವಂತ ದೇಹ ಬಿದ್ದು ಹೋದಾಗ ಬಿದ್ದು ಹೋಗುವುದಿಲ್ಲ. ಏಕೆಂದರೆ ದೇಹ ಬಿದ್ದು ಹೋದಾಗ ದೇಹದ ಒಳಗಿರುವ ಭಗವಂತ ಮತ್ತು ಹೊರಗಿರುವ ಭಗವಂತ ಏಕರೂಪನಾಗುತ್ತಾನೆ ಅಷ್ಟೇ. “ಇಂತಹ ಭಗವಂತ ವಿಭುಃ” ಎನ್ನುತ್ತಾನೆ ಯಮ. ಅಂದರೆ ಆತ ಸರ್ವಗತ, ಸರ್ವಸಮರ್ಥ ಮತ್ತು ಅನೇಕ ರೂಪ(ವಿವಿದೋ ಭವತಿ). ಆತ ಎಲ್ಲಾ ಜೀವ ಜಂತುಗಳಲ್ಲೂ ನಿಂತು ನಡೆಸುತ್ತಿದ್ದಾನೆ. ನಮ್ಮೊಳಗೆ ಅಂತರ್ಯಾಮಿಯಾಗಿದ್ದು, ನಮ್ಮನ್ನು ನಿಯಮಿಸುವ ನಮ್ಮ ಸ್ವಾಮಿ ಆ ಭಗವಂತನ ಅರಿವು ಯಾರಿಗಿದೆಯೋ, ಅವನಿಗೆ ಎಂದೂ ಭಯ-ಶೋಕವಿರುವುದಿಲ್ಲ.
ಇಂತಹ ಭಗವಂತನನ್ನು ಸಾಮಾನ್ಯ ಮಾನವ ಹೇಗೆ ತಿಳಿಯಬೇಕು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ಯಮ ಬಹಳ ಸುಂದರವಾಗಿ ವರ್ಣಿಸಿದ್ದಾನೆ.     

ನಾಯಮಾತ್ಮಾ ಪ್ರವಚನೇನ ಲಭ್ಯೋ  ನ ಮೇಧಯಾ ನ ಬಹುನಾ ಶ್ರುತೇನ
ಯಮೇವೈಷ ವೃಣುತೇ ತೇನ ಲಭ್ಯಃ  ತಸ್ಯೈಷ ಆತ್ಮಾ ವಿವೃಣುತೇ ತನುಂ ಸ್ವಾಮ್ ೨೩

ಕೇವಲ ಪ್ರವಚನ ಮಾಡುವುದರಿಂದ, ಪ್ರವಚನ ಕೇಳುವುದರಿಂದ, ಅಸಾಧಾರಣ ಸ್ಮರಣಶಕ್ತಿ ಹೊಂದಿರುವುದರಿಂದ  ಭಗವಂತನ ಸಾಕ್ಷಾತ್ಕಾರವಾಗುವುದಿಲ್ಲ. ಅಧ್ಯಯನದ ಅಹಂಕಾರವಿದ್ದಲ್ಲಿ ಭಗವಂತ ಎಂದೂ ತೆರೆದುಕೊಳ್ಳುವುದಿಲ್ಲ. ಯಾರನ್ನು ಭಗವಂತ “ಇವನು ನನ್ನ ಭಕ್ತ, ನನ್ನ ಆತ್ಮೀಯ, ಇವನಿಗೆ ತತ್ವಜ್ಞಾನದ ಅರಿವು ಬರಲಿ” ಎಂದು ಸ್ವೀಕಾರ ಮಾಡುವುದಿಲ್ಲವೋ,  ಅಲ್ಲಿಯ ತನಕ ಭಗವಂತ ಅವರಿಗೆ ತಿಳಿಯಲಾರ. ಯಾವಾಗ ಭಗವಂತ ಪ್ರಸನ್ನನಾಗುತ್ತಾನೋ, ಆಗ ಆತ ನಮ್ಮ ತಲೆಯಲ್ಲಿ ಬಂದು ಕೂರುತ್ತಾನೆ. ಅಹಂಕಾರವಿಲ್ಲದ ತನ್ಮಯತೆ, ಭಕ್ತಿಗೆ ಭಗವಂತ ತೆರೆದುಕೊಳ್ಳುತ್ತಾನೆ. ಆಗ ಆತನ ಜ್ಞಾನಾನಂದಮಯವಾದ ಸ್ವರೂಪ ದರ್ಶನ ನಮ್ಮ  ಆತ್ಮಸ್ವರೂಪಕ್ಕಾಗುತ್ತದೆ.

                ನಾವಿರತೋ ದುಶ್ಚರಿತಾನ್ನಾಶಾಂತೋ ನಾಸಮಾಹಿತಃ
                ನಾಶಾಂತಮಾನಸೋ ವಾಽಪಿ ಪ್ರಜ್ಞಾನೇನೈನಮಾಪ್ನುಯಾತ್ ೨೪

ಇಲ್ಲಿ ವಿವರಿಸಿದ ಈ ವಿದ್ಯೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಉಪಾಸನೆ ಮಾಡಿ ಎತ್ತರಕ್ಕೇರಬೇಕಾದರೆ ನಮ್ಮಲ್ಲಿರಬೇಕಾದ ಅರ್ಹತೆಗಳೇನು ಎನ್ನುವುದನ್ನು ಯಮ ಇಲ್ಲಿ ವಿವರಿಸಿದ್ದಾನೆ. ಒಬ್ಬ ಮನುಷ್ಯ ಜ್ಞಾನವನ್ನು ಗಳಿಸಿ, ದೊಡ್ಡ ವಿಜ್ಞಾನಿ(ವಿಶಿಷ್ಠ  ಜ್ಞಾನಿ)ಯಾಗಿ, ಜ್ಞಾನದ ಎತ್ತರಕ್ಕೇರಿದರೂ(ಪ್ರಜ್ಞಾನ) ಕೂಡ, ಅಲ್ಲಿ ಭಕ್ತಿ ಇಲ್ಲದಿದ್ದರೆ ಭಗವಂತನನ್ನು ಸೇರಲು ಸಾಧ್ಯವಿಲ್ಲ. ಎಷ್ಟೇ  ಶಾಸ್ತ್ರ ಪಾರಾಂಗತರಾದರೂ ಕೂಡಾ, ನಮ್ಮ ಜೀವನದಲ್ಲಿ ಕೆಲವು ನಿಯತ್ತು/ಶಿಸ್ತನ್ನು ಅಳವಡಿಸಿಕೊಳ್ಳದೇ ನಾವು ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಿಲ್ಲ. ಯಾವುದು ಸಾಮಾಜಿಕವಾಗಿ ಅನ್ಯಾಯವೋ, ಯಾವುದನ್ನು ಶಾಸ್ತ್ರಗಳು ಅಧರ್ಮ ಎಂದು ಕರೆಯುತ್ತವೋ,  ಅದನ್ನು ನಾವು ಮೊದಲು ಬಿಡಬೇಕು. ನಮ್ಮ ನಡತೆ ಸ್ವಚ್ಛವಿಲ್ಲದಿದ್ದರೆ ನಮ್ಮ ಯಾವ ಪಾಂಡಿತ್ಯವೂ ನಮ್ಮನ್ನು ಉದ್ಧಾರ ಮಾಡುವುದಿಲ್ಲ. ಜೀವನದಲ್ಲಿ ನಾವು ತಪ್ಪು ಮಾಡಿರಬಹುದು, ಆದರೆ ಆ ತಪ್ಪಿನ ಅರಿವಾದಾಗ, ಹಿಂದಿನ ಘಟನೆಗಳನ್ನು ಮೆಲುಕು ಹಾಕುತ್ತಾ ಕುಳಿತುಕೊಳ್ಳುವ ಬದಲು, ಮುಂದೆ ನಮ್ಮಿಂದ ಅಂತಹ ತಪ್ಪು ಘಟಿಸದಂತೆ ಎಚ್ಚರವಹಿಸಿ ಬದುಕಬೇಕು. ಎಲ್ಲಿಯ ತನಕ ನಾವು ನಮ್ಮ ನಡತೆಯಲ್ಲಿನ ದೋಷವನ್ನು ತಿದ್ದಿಕೊಳ್ಳುವುದಿಲ್ಲವೋ, ಅಲ್ಲಿಯ ತನಕ   ಭಗವಂತ ಅನುಗ್ರಹಿಸುವುದಿಲ್ಲ.
ಎಲ್ಲಕ್ಕೂ ಮಿಗಿಲಾಗಿ ನಮಗೆ ದೇವರ ಮೇಲೆ ನಂಬಿಕೆ ಇರಬೇಕು. ಮೊದಲು ನಾವು  ಭಗವಂತನನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಪ್ರಾಮಾಣಿಕ ನಡೆ, ಅಂತರಂಗದಲ್ಲಿ ನಿಶ್ಚಲವಾದ ಭಗವನ್ ನಿಷ್ಠೆ - ಇವು  ಅಧ್ಯಾತ್ಮ ಸಾಧನೆ ಮಾಡುವವರಲ್ಲಿ ಇರಬೇಕಾದ ಮೂಲ ಅರ್ಹತೆ.
ಶಾಂತವಾದ, ದೃಡವಾದ, ಗೊಂದಲಕ್ಕೊಳಗಾಗದ, ಸ್ಥಿರವಾದ  ಮನಸ್ಸು; ಅಚಲವಾದ ಭಗವನ್ ನಿಷ್ಠೆ; ಪ್ರಾಮಾಣಿಕ ನಡತೆ-ಇವು ಭಗವಂತನ ಅನುಗ್ರಹ ಪಡೆಯಲು ಬೇಕಾದ ಅರ್ಹತೆಗಳು. ಇದಿಲ್ಲದಿದ್ದರೆ ಅಧ್ಯಾತ್ಮದಲ್ಲಿ ತತ್ವಜ್ಞಾನ ಸಿದ್ಧಿಸುವುದಿಲ್ಲ.  

            ಯಸ್ಯ ಬ್ರಹ್ಮ ಚ ಕ್ಷತ್ರಂ ಚ ಉಭೇ ಭವತ ಓದನಃ
            ಮೃತ್ಯುರ್ಯಸ್ಯೋಪಸೇಚನಂ ಕಃ ಇತ್ಥಾ ವೇದ ಯತ್ರ ಸಃ ೨೫

ಭಗವಂತನಿಗೆ ಇಡೀ ವಿಶ್ವ ಪ್ರಳಯ ಕಾಲದಲ್ಲಿ ಒಂದು ತುತ್ತು ಅನ್ನವಿದ್ದಂತೆ. ಬ್ರಾಹ್ಮಣ ವರ್ಣದ ಅಭಿಮಾನಿ ದೇವತೆ ಚತುರ್ಮುಖ ಬ್ರಹ್ಮ, ಕ್ಷತ್ರೀಯ ವರ್ಣದ ಅಭಿಮಾನಿ ದೇವತೆಯಾದ ವಾಯುದೇವರು ಭಗವಂತನಿಗೆ ಪ್ರಳಯಕಾಲದಲ್ಲಿ ಒಂದು ತುತ್ತು ಅನ್ನ.  ಮೃತ್ಯು(ಗರುಡ-ಶೇಷ-ರುದ್ರರು), ಭೂಲೋಕದಲ್ಲಿರುವ ಎಲ್ಲಾ ಜೀವರಿಗೂ ಮೃತ್ಯುವಾಗಿರುವ ಯಮ-  ಪ್ರಳಯಕಾಲದಲ್ಲಿ  ಭಗವಂತನಿಗೆ  ಊಟಕ್ಕೆ ಕಲಸಿಕೊಳ್ಳುವ ವ್ಯಂಜನವಿದ್ದಂತೆ.  “ಇಂತಹ ಭಗವಂತನ ಎತ್ತರವನ್ನು ಅರಿತವರು ಯಾರಿದ್ದಾರೆ ?”  ಎನ್ನುತ್ತಾನೆ ಯಮ. ಭಗವಂತನ ಸಮಗ್ರ ದರ್ಶನದ ಕಿಂಚಿತ್ ಅರಿವು ಇರುವುದಾದರೆ ಆ ಬ್ರಹ್ಮ-ವಾಯುವಿಗೆ(ಕಃ) ಮಾತ್ರ.  “ಇಂತಹ ಭಗವಂತನ ಬಗೆಗೆ ನನಗೆ ತಿಳಿದಿರುವುದನ್ನು ನಿನಗೆ ಹೇಳುತ್ತೇನೆ” ಎನ್ನುವ  ಭಾವ ಈ ಶ್ಲೋಕದಲ್ಲಿ ವ್ಯಕ್ತವಾಗಿದೆ.

ಇತಿ ಕಾಠಕೋಪನಿಷದಿ ಪ್ರಥಮಾಧ್ಯಾಯೇ ದ್ವಿತೀಯಾ ವಲ್ಲೀ
ಇಲ್ಲಿಗೆ ಕಾಠಕೋಪನಿಷತ್ತಿನ ಮೊದಲ ಅಧ್ಯಾಯದ ಎರಡನೇ ಬಳ್ಳಿ(ವಲ್ಲೀ) ಮುಗಿಯಿತು.

Thursday, June 21, 2012

Kathopanishad in Kannada Chapter-01 Canto-02 Shloka 16-20


              ಏತದ್ಧ್ಯೇವಾಕ್ಷರಂ ಬ್ರಹ್ಮ ಏತದ್ಧ್ಯೇವಾಕ್ಷರಂ ಪರಮ್
              ಏತದ್ಧ್ಯೇವಾಕ್ಷರಂ ಜ್ಞಾತ್ವಾ ಯೋ ಯದಿಚ್ಛತಿ ತಸ್ಯ ತತ್                         ೧೬

ಅರ್ಥಗಳಲ್ಲೇ  ಮಹಾ ಅರ್ಥವಾದ, ಅಕ್ಷರ ಶಬ್ದ ವಾಚ್ಯನಾದ, ಆ ಪರಬ್ರಹ್ಮ  ಭಗವಂತನನ್ನು ಹೇಳುವ ಓಂಕಾರ ಅಕ್ಷರಗಳಲ್ಲೇ ಶ್ರೇಷ್ಠ ಅಕ್ಷರ.  ಈ ಶ್ಲೋಕದಲ್ಲಿ ಬಂದ 'ಅಕ್ಷರ' ಪದಕ್ಕೆ  ವಿಶೇಷ ಅರ್ಥವಿದೆ. ಭಗವದ್ ಪರವಾಗಿ ನೋಡಿದಾಗ: ಅಶ್ನುತೇ ಇತಿ ಅಕ್ಷರಃ. ಅಂದರೆ  ಎಲ್ಲಾ  ಕಡೆ ವ್ಯಾಪಿಸಿರುವವ; ಅ+ಕ್ಷರ-ಅಕ್ಷರ. ಅಂದರೆ ನಾಶವಿಲ್ಲದ ತತ್ವ; ಅಧಿಕಂ ಕ್ಷರತಿ ಇತಿ ಅಕ್ಷರಃ. ಅಂದರೆ  ಸರ್ವಾಭೀಷ್ಠಪ್ರದ; ಅಕ್ಷ+ರ-ಅಕ್ಷರ. ಅಂದರೆ ಅಕ್ಷಗಳಲ್ಲಿ(ಇಂದ್ರಿಯಗಳಲ್ಲಿ)ದ್ದು, ಅವುಗಳನ್ನು ನಿಯಂತ್ರಿಸುತ್ತಾ ರಮಿಸುವವ; ಅ+ಕ್ಷ+ರ-ಅಕ್ಷರ. ಇಲ್ಲಿ ಅ ಅಂದರೆ ಅಲ್ಲ/ಇಲ್ಲ. ಭಗವಂತನಲ್ಲಿ ಯಾವುದೇ ದೋಷವಿಲ್ಲ. ಅವನು ಈ ಜಗತ್ತಿನಲ್ಲಿ ಕಾಣುವ ಯಾವ ವಸ್ತುವಿನಂತೆಯೂ ಇಲ್ಲ( ಸರ್ವವಿಲಕ್ಷಣ ಹಾಗೂ ಸರ್ವದೋಷ ದೂರ); ‘ಕ್ಷ’ ಅಂದರೆ ಕ್ಷತಿ ಅಥವಾ ಆಶ್ರಯದಾತ. ಭಗವಂತ ಎಲ್ಲವುದಕ್ಕೂ ಆಶ್ರಯದಾತ; ‘ರ’ ಅಂದರೆ ರಮಿಸುವುದು. ಸೃಷ್ಟಿ ಮತ್ತು ಸಂಹಾರ ಕರ್ತನಾದ ಭಗವಂತ ಸದಾ ಆನಂದಮಯ. ಇಂತಹ ಓಂಕಾರವಾಚ್ಯ ಭಗವಂತನನ್ನು ತಿಳಿದು ತನ್ಮಯತೆಯಿಂದ ಉಪಾಸನೆ ಮಾಡುವವರು ಬಯಸಿದ್ದನ್ನು ಪಡೆಯುತ್ತಾರೆ. 
ಓಂಕಾರ ಬಯಸಿದ್ದನ್ನು ಕೊಡುವ ಕಲ್ಪವೃಕ್ಷ. ಮಂತ್ರಗಳಲ್ಲಿ ಇದಕ್ಕೆ ಸಮನಾದ ಇನ್ನೊಂದು ಪದವಿಲ್ಲ. ಆದರೆ ಇಲ್ಲಿ ಶುದ್ಧ ಮನಸ್ಸು, ಏಕಾಗ್ರತೆ ಬಹಳ ಮುಖ್ಯ. ಫಲ ಕೊಡುವುದು ತುಟಿಯ ಉಚ್ಛಾರವಲ್ಲ, ಮನಸ್ಸಿನ ತನ್ಮಯತೆ. ಇಲ್ಲಿ ಒಂದು ಮುಖ್ಯವಾದ ವಿಚಾರವೆಂದರೆ: ಅನಂತ ಫಲವನ್ನು ಕೊಡುವ ಕಲ್ಪವೃಕ್ಷವಾದ ಓಂಕಾರವನ್ನು ಅಲ್ಪ ಫಲ ಬಯಸಿ ಉಪಾಸನೆ ಮಾಡುವುದು ಸರಿಯಲ್ಲ.           

            ಏತದಾಲಂಬನಂ ಶ್ರೇಷ್ಠಮೇತದಾಲಂಬನಂ ಪರಮ್
            ಏತದಾಲಂಬನಂ ಜ್ಞಾತ್ವಾ ಬ್ರಹ್ಮಲೋಕೇ ಮಹೀಯತೇ         `                 ೧೭

ಸರ್ವಶ್ರೇಷ್ಠನಾದ ಭಗವಂತನೇ ಜಗತ್ತಿಗೆ ಎಲ್ಲವುದಕ್ಕಿಂತ ವಿಲಕ್ಷಣವಾದ, ಸರ್ವಶ್ರೇಷ್ಠ ಆಧಾರ. ಓಂಕಾರದಿಂದ ಉಪಾಸನೆ ಮಾಡಿ, ಈ ಜಗತ್ತಿನ ಆಧಾರಭೂತನಾದ ಭಗವಂತನನ್ನು ಕೃತಜ್ಞತೆಯಿಂದ ತಿಳಿದರೆ “ನಿನ್ನೆಲ್ಲಾ ಸಂಸಾರ ಬಂಧವನ್ನು ಕಳಚಿಕೊಂಡು ವೈಕುಂಠದಲ್ಲಿ ಭಗವಂತನನ್ನು ಸೇರುತ್ತೀಯ” ಎಂದಿದ್ದಾನೆ ಯಮ.

         ನ ಜಾಯತೇ ಮ್ರಿಯತೇ ವಾ ವಿಪಶ್ಚಿನ್ನಾಯಂ ಕುತಶ್ಚಿನ್ನ ಬಭೂವ ಕಶ್ಚಿತ್
        ಅಜೋ ನಿತ್ಯಃ ಶಾಶ್ವತೋಽಯಂ ಪುರಾಣೋ   ನ ಹನ್ಯತೇ ಹನ್ಯಮಾನೇ ಶರೀರೇ ೧೮

ಭಗವಂತನನ್ನು ಜ್ಞಾನದ ಕಣ್ಣಿನಿಂದ ಕಂಡ ಅಪರೋಕ್ಷ ಜ್ಞಾನಿ ಹುಟ್ಟು ಸಾವಿನಿಂದ ಮುಕ್ತನಾಗುತ್ತಾನೆ. ಮೋಕ್ಷವನ್ನು ಪಡೆದ ಜೀವ ಮುಂದೆಂದೂ ದೈಹಿಕವಾಗಿ ಹುಟ್ಟು-ಸಾವಿಗೊಳಗಾಗುವುದಿಲ್ಲ. ನಮ್ಮ ಹೃತ್ಕಮಲದಲ್ಲಿ ನೆಲೆಸಿರುವ ಭಗವಂತನಿಗೆ ಹುಟ್ಟು-ಸಾವುಗಳಿಲ್ಲ. ಆದ್ದರಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವನೂ ಕೂಡಾ, ದೇಹದಿಂದಲೂ ಹುಟ್ಟು-ಸಾವು ಹೊಂದುವುದಿಲ್ಲ. ಅಸಾಧಾರಣವಾದ ಈ ಸ್ಥಿತಿ ಸಿಗುವುದು  ಭೌತಿಕ ದೇಹ ತ್ಯಾಗ ಮಾಡಿ ಮೋಕ್ಷವನ್ನು ಸೇರಿದಾಗ ಮಾತ್ರ.
ವಸ್ತುತಃ ಜೀವಸ್ವರೂಪಕ್ಕೆ ಎಂದೂ ಹುಟ್ಟು-ಸಾವುಗಳಿಲ್ಲ. ನಾವು ಕಾಣುವ ಹುಟ್ಟು-ಸಾವು ಕೇವಲ ಭೌತಿಕ ಶರೀರಕ್ಕೆ ಸಂಬಂಧಪಟ್ಟಿದ್ದು. ಹುಟ್ಟುವುದು ಒಂದು ವಿಕಾರ, ಸಾಯುವುದು ಇನ್ನೊಂದು ಬದಲಾವಣೆ ಅಷ್ಟೇ. ಒಬ್ಬ ವ್ಯಕ್ತಿ ಸತ್ತಾಗ ಅವನ ದೇಹ ನಾಶವಾಗುವುದೇ ಹೊರತು ಆತನ ಜೀವ ನಾಶವಾಗುವುದಿಲ್ಲ. ಅನಾದಿ-ಅನಂತವಾಗಿರುವ ಜೀವ ತನ್ನ ಪುರವನ್ನು(ದೇಹವನ್ನು) ಬದಲಿಸುವುದೇ ನಾವು ಕಾಣುವ ಹುಟ್ಟು-ಸಾವು.  ಮೋಕ್ಷದಲ್ಲಿ ಇಂತಹ ನಾಶವಾಗುವ ದೇಹವಿಲ್ಲ. ಆದ್ದರಿಂದ ದೇಹ ನಾಶವೂ ಇಲ್ಲದ ಸ್ಥಿತಿ ಮೋಕ್ಷ. 

            ಹಂತಾ ಚೇನ್ಮನ್ಯತೇ ಹಂತುಂ ಹತಶ್ಚೇನ್ಮನ್ಯತೇ ಹತಮ್
            ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ                       ೧೯

ಒಬ್ಬ ಕೊಲೆಗಡುಕ ಇನ್ನೊಬ್ಬನನ್ನು ಕೊಂದೆ ಎಂದುಕೊಂಡರೆ, ಯಾರೋ ಒಬ್ಬ ಸತ್ತಾಗ ಇನ್ನೊಬ್ಬ ಇವನು ಸತ್ತ ಎಂದು ತಿಳಿದುಕೊಂಡರೆ- ಇವರೆಲ್ಲರನ್ನೂ ಭ್ರಮೆಗೊಳಗಾದವರು ಎನ್ನಬಹುದು. ಕೇವಲ ದೇಹ ನಾಶವಾದಾಗ ಆ ಜೀವವೇ ನಾಶವಾಯಿತು ಎಂದು ತಿಳಿದುಕೊಳ್ಳುವುದು ನಮ್ಮ ಭ್ರಮೆ. ದೇಹವನ್ನೂ ಕೂಡ ಕೊಲ್ಲಬೇಕು ಎಂದರೆ ಅದು ಭಗವಂತನ ಇಚ್ಛೆ ಇಲ್ಲದೇ ಸಾಧ್ಯವಿಲ್ಲ. ಏಕೆಂದರೆ ನಮ್ಮ ಜೀವಸ್ವರೂಪದೊಳಗೆ ಭಗವಂತನಿದ್ದಾನೆ.

                      ಅಣೋರಣೀಯಾನ್ ಮಹತೋ ಮಹೀಯಾನ್ ಆತ್ಮಾಽಸ್ಯ ಜಂತೋರ್ನಿಹಿತೋ ಗುಹಾಯಾಮ್
                      ತಮಕ್ರತುಃ ಪಶ್ಯತಿ ವೀತಶೋಕೋ  ಧಾತುಪ್ರಸಾದಾನ್ಮಹಿಮಾನಮಾತ್ಮನಃ                 ೨೦

ಮಹತೋಮಯನಾದ ಭಗವಂತ ಅಣೋರಣೀಯನಾಗಿ ಜೀವ ಸ್ವರೂಪದ ಹೃದಯಗುಹೆಯಲ್ಲಿ ನೆಲೆಸಿದ್ದಾನೆ. ದೈಹಿಕವಾಗಿ ಪದೇ ಪದೇ ಹುಟ್ಟಿ ಸಾಯುವ ಜೀವ, ಸಾವನ್ನು ಗೆಲ್ಲಬೇಕಾದರೆ ಮೊದಲು ತನ್ನ ಅಂತರಾತ್ಮದಲ್ಲಿರುವ ಆ ಪರಮಾತ್ಮನನ್ನು ಕಾಣಬೇಕು. ಯಾರ ಮನಸ್ಸು ನಿಶ್ಚಯವಾಗಿ ಅ-ಕಾರವಾಚ್ಯನಾದ ಭಗವಂತನಲ್ಲಿ ನೆಲೆಗೊಳ್ಳುತ್ತದೋ ಅವನು ಎಲ್ಲಾ ಶೋಕಗಳಿಂದಲೂ ಮುಕ್ತನಾಗುತ್ತಾನೆ. ಆದ್ದರಿಂದ ಪ್ರಾಪಂಚಿಕ ವಿಷಯದಲ್ಲಿ ಮನಸ್ಸನ್ನು ನೆಟ್ಟು ದುಃಖಿಸುವುದಕ್ಕಿಂತ, ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಿ ಚಿಂತೆಯಿಂದ ಪಾರಾಗಬಹುದು. ನಮ್ಮೊಳಗಿದ್ದು ನಮ್ಮನ್ನು ಧಾರಣೆ ಮಾಡಿರುವ ಆ ಭಗವಂತ ಅನುಗ್ರಹಿಸಿದರೆ ಮಾತ್ರ ನಾವು ಅವನನ್ನು ತಿಳಿಯಲು ಸಾಧ್ಯ. ಈ ರೀತಿ ಭಗವಂತನನ್ನು ತಿಳಿದವನು ಭಗವಂತನನ್ನು ಸೇರಬಲ್ಲ. “ಭಗವಂತನ ಅನುಗ್ರಹದಿಂದ ಒಳಗಣ್ಣಿನಿಂದ ಆತನನ್ನು ನೋಡು, ಅದರಿಂದ ದುಃಖರಹಿತ ಮೋಕ್ಷ ಸಿಗುತ್ತದೆ” ಎಂದು ಯಮ ನಚಿಕೇತನಿಗೆ ಉಪದೇಶ ಮಾಡುತ್ತಾನೆ.

Sunday, June 17, 2012

Kathopanishad in Kannada Chapter-01 Canto-02 Shloka 13-15

                ಏತಚ್ಛ್ರುತ್ವಾ ಸಂಪರಿಗೃಹ್ಯ ಮರ್ತ್ಯಃ   ಪ್ರವೃಹ್ಯ ಧರ್ಮ್ಯಮಣುಮೇತಮಾಪ್ಯ
                ಸ ಮೋದತೇ ಮೋದನೀಯಂ ಹಿ ಲಬ್ಧ್ವಾ  ವಿವೃತಂ ಸದ್ಮ ನಚಿಕೇತಸಂ ಮನ್ಯೇ            ೧೩

ಈ ಶ್ಲೋಕದಲ್ಲಿ ‘ಸಂಪರಿಗೃಹ’ ಎನ್ನುವ ಪದ ಬಳಕೆಯಾಗಿದೆ. ಪರಿಗ್ರಹ ಎಂದರೆ ‘ಆತ್ಮಸಾತ್’ ಮಾಡಿಕೊಳ್ಳುವುದು. ಎಲ್ಲವನ್ನೂ ಕೇಳಿ ತಿಳಿದುಕೊಂಡು, ನಿಜವಾದ ದಾರಿ ಯಾವುದೆಂದು ಗುರುತಿಸಿಕೊಂಡು, ಆ ದಾರಿಯಲ್ಲಿ ಹೋಗುವುದು. ಯಾವುದು ಸಮೀಚೀನವಾದದ್ದು ಅದನ್ನು ಗ್ರಹಣ ಮಾಡುವುದು ಸಂಪರಿಗ್ರಹ.  ಇದೇ ರೀತಿ ಇಲ್ಲಿ ‘ಪ್ರವೃಹ್ಯ’ ಎನ್ನುವ ಇನ್ನೊಂದು ಪದ ಬಳಕೆಯಾಗಿದೆ. ಪ್ರವೃಹ್ಯ ಎಂದರೆ ಬೇರ್ಪಡಿಸಿ ತಿಳಿಯುವುದು. ನಮಗೆ ಗೊತ್ತಿರುವ ಪ್ರಪಂಚಕ್ಕಿಂತ ಬೇರೆಯಾದ ಸತ್ಯವನ್ನು ಅರಸುವ ಪ್ರಯತ್ನ; ಜೀವಕ್ಕಿಂತ ಬೇರೆಯಾದ, ಜೀವನನ್ನು  ನಿಯಂತ್ರಿಸುವ ಒಂದು ಶಕ್ತಿ ಇದೆ ಎಂದು ಗುರುತಿಸುವುದು ಪ್ರವೃಹ್ಯ.
ಅಧ್ಯಾತ್ಮದ ಸಂಗತಿಯನ್ನು ಕೇಳಿ ತಿಳಿದು, ನಿಜವಾದ ದಾರಿಯನ್ನು ಗುರುತಿಸಿ,  ನಮ್ಮ ಮನಸ್ಸು ಗ್ರಹಿಸಬಲ್ಲಂತಹ ಎಲ್ಲಾ ಭೌತಿಕ ಪ್ರಪಂಚವನ್ನು ಬೇರ್ಪಡಿಸಿ, ಅಪ್ರಾಕೃತವಾದ, ಅಭೌತಿಕವಾದ, ನನ್ನ ಜೀವ ಸ್ವರೂಪಕ್ಕಿಂತಲೂ ವಿಲಕ್ಷಣವಾದ ಒಂದು ಶಕ್ತಿಯನ್ನು, ಇಡೀ ಪ್ರಪಂಚವನ್ನು ಧಾರಣೆ ಮಾಡಿರುವ ಭಗವಂತನನ್ನು, ಜ್ಞಾನಿಗಳ ಒಡನಾಟ ಮತ್ತು ಸೇವೆಯಿಂದ ತಿಳಿದಾಗ-ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಇದು ನಿಜವಾದ ಆನಂದದ ಅನುಭವ. “ನಚಿಕೇತನಿಗೆ ಇಂತಹ ಆನಂದದ ಮನೆಯ ಬಾಗಿಲು ತೆರೆದಿದೆ” ಎನ್ನುತ್ತಾನೆ ಯಮ.

ಅನ್ಯತ್ರ ಧರ್ಮಾದನ್ಯತ್ರಾಧರ್ಮಾ  ದನ್ಯತ್ರಾಸ್ಮಾತ್ಕೃತಾಕೃತಾತ್
ಅನ್ಯತ್ರ ಭೂತಾಚ್ಚ ಭವ್ಯಾಚ್ಚ  ಯತ್ತತ್ಪಶ್ಯಸಿ ತದ್ವದ              ೧೪

ಇಲ್ಲಿಯ ತನಕ ಯಮನ ಹೊಗಳಿಕೆಯ ಮಾತನ್ನು ಕೇಳಿದ ನಚಿಕೇತ ಹೇಳುತ್ತಾನೆ: ನನಗೆ ನಿನ್ನ ಯಾವ ಹೊಗಳಿಕೆಯ ಮಾತೂ ಬೇಕಾಗಿಲ್ಲ. ನನಗೆ ನಾನು ಕೇಳಿದ ಪ್ರಶ್ನೆಗೆ ಉತ್ತರಬೇಕು. ಪ್ರಪಂಚದಲ್ಲಿ ಧರ್ಮ ಮತ್ತು ಅಧರ್ಮವನ್ನು ಮೀರಿನಿಂತ, ಪಾಪ ಪುಣ್ಯಗಳ ಗೊಂದಲವೇ ಇಲ್ಲದ ಸ್ಥಿತಿಯನ್ನು ನನಗೆ ವಿವರಿಸು. ಕೃತಾಕೃತಗಳಿಂದ ಅತೀತವಾದ, ಧರ್ಮಾಧರ್ಮಗಳಿಂದ ಅತೀತವಾದ, ನೀನು ಕಂಡಿರುವ ತತ್ವದ ಬಗ್ಗೆ ಹೇಳು ಎನ್ನುತ್ತಾನೆ ನಚಿಕೇತ. ಇಲ್ಲಿ ನಚಿಕೇತ ಯಮನ ಹೊಗಳಿಕೆಯಿಂದ ಯಾವುದೇ ರೀತಿ ವಿಚಲಿತನಾಗದೆ, ತನ್ನ ಜ್ಞಾನ ಪೀಪಾಸುವನ್ನು ನೇರವಾಗಿ ಯಮನಲ್ಲಿ ತೋಡಿಕೊಳ್ಳುವುದು ನಮಗೆ ಸ್ಪಷ್ಟವಾಗಿ ಕಾಣುತ್ತದೆ. ನಚಿಕೇತನ ಈ ಧೃಡ ಮನಸ್ಸನ್ನು ಕಂಡ ಯಮ ನೇರವಾಗಿ ಆತನ  ಪ್ರಶ್ನೆಗೆ ಉತ್ತರಿಸುವುದನ್ನು ಮುಂದಿನ ಶ್ಲೋಕದಲ್ಲಿ ಕಾಣಬಹುದು.

            ಸರ್ವೇ ವೇದಾ ಯತ್ಪದಮಾಮನಂತಿ  ತಪಾಂಸಿ ಸರ್ವಾಣಿ ಚ ಯದ್ವದಂತಿ
            ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ  ತತ್ತೇ ಪದಂ ಸಂಗ್ರಹೇಣ ಬ್ರವೀಮ್ಯೋಮಿತ್ಯೇತತ್ ೧೫ 

ನಚಿಕೇತನ ಪ್ರಶ್ನೆಗೆ ಉತ್ತರಿಸುತ್ತಾ ಯಮ ಹೇಳುತ್ತಾನೆ: “ಸರ್ವ ವೇದಗಳು ಯಾರನ್ನು ಪ್ರತಿಪಾದಿಸುತ್ತವೋ, ಎಲ್ಲಾ ತರ್ಕಗಳು ಯಾರಲ್ಲಿ ಅಂತ್ಯವಾಗುತ್ತವೋ, ಯಾರನ್ನು ಇಚ್ಛಿಸುತ್ತಾ ಬ್ರಹ್ಮಚರ್ಯವನ್ನು ಆಚರಿಸುತ್ತಾರೋ-ಆ ಪದವನ್ನು ಅಡಕವಾಗಿ ನಿನಗೆ ಹೇಳುತ್ತಾನೆ: ಅದುವೇ ‘ಓಂ’ ”  ಎಂದು.
ಇಲ್ಲಿ ಯಮ  “ಸರ್ವ ವೇದಗಳೂ ಅಂತತಃ ಹೇಳುವುದು ಸರ್ವೋತ್ತಮನಾದ ಭಗವಂತನನ್ನಲ್ಲದೇ ಇನ್ನೇನನ್ನೂ ಅಲ್ಲ” ಎಂದಿದ್ದಾನೆ. ವೇದದಲ್ಲಿ ಬರುವ ‘ಅಗ್ನಿ, ವರುಣ, ಮಿತ್ರ, ವಾಯು, ಇತ್ಯಾದಿ ನಾಮಗಳು ಮೂಲತಃ ಭಗವಂತನ ನಾಮಗಳು. ಇದನ್ನು ನಮಗೆ ತಿಳಿಸುವುದಕ್ಕೋಸ್ಕರವೇ ವೇದವ್ಯಾಸರು ಸಹಸ್ರನಾಮ ಗ್ರಂಥ ರಚನೆ ಮಾಡಿದರು. ದೇವರ ಕುರಿತು ಅನ್ವೇಷಣೆಗೆ ಹೊರಟ ಎಲ್ಲಾ ಭಾಷೆಯ, ಎಲ್ಲಾ ಜಾತಿಯ, ಎಲ್ಲಾ ಗ್ರಂಥಗಳೂ ಕೂಡಾ, ಒಬ್ಬನೇ  ಒಬ್ಬ ದೇವರನ್ನು ಹೇಳುತ್ತವೆ. ಪ್ರಪಂಚದ ಎಲ್ಲಾ ಬುದ್ಧಿಜೀವಿಗಳ, ಎಲ್ಲಾ ತರ್ಕಗಳೂ ಕೂಡ ದೇವರ ಅಸ್ತಿತ್ವವನ್ನೇ ರುಜುವಾತು ಮಾಡುತ್ತವೆ. ತರ್ಕದ ಪರಿಸಮಾಪ್ತಿ ಕೇವಲ ಭಗವಂತ. ಈ ಕಾರಣದಿಂದ “ಭಗವಂತನನ್ನು  ಬಯಸಿ ಬ್ರಹ್ಮಚರ್ಯದಿಂದ ಭಗವಂತನೆಡೆಗೆ ಸಾಗು” ಎನ್ನುತ್ತಾನೆ ಯಮ. [ಇಲ್ಲಿ ಬ್ರಹ್ಮಚರ್ಯ ಎಂದರೆ:  (೧) ದೈಹಿಕವಾಗಿ ಇಂದ್ರಿಯ ನಿಗ್ರಹ; (೨) ಭಗವಂತನನ್ನು ತಿಳಿಸುವ ವೇದಾಧ್ಯಯನಕ್ಕಾಗಿ ಇಂದ್ರಿಯ ನಿಗ್ರಹ (೩) ಅಧ್ಯಯನದಿಂದ ಭಗವಂತನೆಡೆಗೆ ಸಾಗುವುದು. ಇತ್ಯಾದಿ.]
ಇಲ್ಲಿ ಯಮ  “ಸಮಸ್ತ ವೈದಿಕ ವಾಙ್ಮಯ ಹೇಳುವ, ಭಗವಂತನ ಮಹಿಮೆಯ ಬಿತ್ತರವನ್ನು ಹೇಳುವ ಬೀಜಾಕ್ಷರವನ್ನು ನಿನಗೆ ಹೇಳುತ್ತೇನೆ: ಅದುವೇ ‘ಓಂ’ ” ಎಂದಿದ್ದಾನೆ. ‘ಓಂ’ ಅನ್ನುವುದು ಕೇವಲ ಭಗವಂತನಿಗೆ ಮೀಸಲಾದ(exclusive) ಹೆಸರು. ಇದನ್ನು ಯಾವ ವ್ಯಕ್ತಿಗಾಗಲೀ, ದೇವತೆಗಳಿಗಾಗಲೀ ಬಳಸುವುದಿಲ್ಲ.  ಇದು ಭಗವಂತನ ವಿಶಿಷ್ಠ ನಾಮಧೇಯ. ‘ಓಂ’ ಸರ್ವ ವೇದವಾಙ್ಮಯದ ಬೀಜಾಕ್ಷರ. ಅದರಲ್ಲಿ ಸಮಸ್ತ ವೇದದ ಸಮಸ್ತ ಅರ್ಥಗಳೂ ಸೇರಿಕೊಂಡಿದೆ. ಜೈನ, ಬೌದ್ಧ ಧರ್ಮದವರಿಗೆ, ಹಿಂದೂ ಧರ್ಮದ ವಿವಿಧ ಕವಲಿನವರಿಗೂ ಕೂಡಾ ‘ಓಂ’ ಮೂಲ ಬೀಜಾಕ್ಷರ. ವಿದೇಶದವರು ಬಳಸುವ ‘ಆಮಿನ್, ಓಮ್ನಿ’, ಇತ್ಯಾದಿ ಕೂಡಾ ಮೂಲತಃ ಸಂಸ್ಕೃತದ ‘ಓಂ’ನ ವಿಕಾರ ರೂಪ. ಹೀಗೆ ವಿಶ್ವವ್ಯಾಪಿ ಓಂಕಾರ ಎಲ್ಲಾ ರೂಪದಲ್ಲೂ ಭಗವಂತನನ್ನು ಹೇಳುವ ಶಬ್ದ. ದೇವರನ್ನು ಕುರಿತು ಧ್ಯಾನ ಮಾಡಲು ಒಂದು ಮಂತ್ರ ಬೇಕು ಎಂದರೆ ಅದರಲ್ಲಿ ಅತ್ಯಂತ ಶ್ರೇಷ್ಠವಾದ ಮಂತ್ರ/ಬೀಜಾಕ್ಷರ ಓಂಕಾರ.
ಇಲ್ಲಿ ನಿಮಗೊಂದು ಪ್ರಶ್ನೆ ಮೂಡಬಹುದು. ಭಗವಂತನ ವಿಶೇಷ ನಾಮವಾದ ಓಂಕಾರವನ್ನು ಸ್ತ್ರೀಯರು ಏಕೆ ಹೇಳಬಾರದು ಎಂದು. ಸ್ತ್ರೀಯರು ಓಂಕಾರ ಹೇಳಬಾರದು ಎನ್ನುವುದು ಪೂರ್ಣ ಅವೈಜ್ಞಾನಿಕ. ಓಂ ಎನ್ನುವುದು ಅಕ್ಷರ ಮಾಲಿಕೆಯಲ್ಲಿ ಒಂದು ಅಕ್ಷರ ಕೂಡಾ ಹೌದು. ಯಾವ ಅಕ್ಷರ ಮಾಲಿಕೆಯೂ ಯಾರಿಗೂ ನಿಷಿದ್ಧವಲ್ಲ. ಆದ್ದರಿಂದ ‘ಓಂಕಾರವನ್ನು ಎಲ್ಲರೂ ಹೇಳಬಹುದು. ಆದರೆ ಓಂಕಾರ ಜಪ ಮಾತ್ರ ಎಲ್ಲರೂ ಮಾಡುವಂತಿಲ್ಲ. ಕಾರಣ:   ಓಂಕಾರದ ಹಿಂದಿರುವ ಎಲ್ಲಾ ಅರ್ಥಾನುಸಂಧಾನದೊಂದಿಗೆ  ಜಪ ಮಾಡಿದರೆ ಅದು ಅತ್ಯಂತ ಪರಿಣಾಮಕಾರಿ. ಸಾಮಾನ್ಯವಾಗಿ ಸನ್ಯಾಸಿಗಳು ಓಂಕಾರ ಜಪವನ್ನು ಮಾಡುತ್ತಾರೆ. ಗ್ರಹಸ್ಥನಾದವನು ನಿರಂತರ ಓಂಕಾರ ಜಪ ಮಾಡುವುದು ಅಷ್ಟು ಸೂಕ್ತವಲ್ಲ. ಗಂಡಸರು ಗರಿಷ್ಠ ಹತ್ತು ಬಾರಿ ಮಾಡಬಹುದಾದರೆ, ಸಂಸಾರ ಜೀವನ ನಡೆಸುವ ಹೆಂಗಸರು ಓಂಕಾರ ಜಪ ಮಾಡದಿರುವುದು ಒಳ್ಳೆಯದು. ಏಕೆಂದರೆ ಓಂಕಾರವನ್ನು ಪೂರ್ಣ ತೊಡಗಿಸಿಕೊಂಡು, ಅರ್ಥಾನುಸಂಧಾನದಿಂದ ಜಪ  ಮಾಡುವುದರಿಂದ ಅದು ಮನಸ್ಸಿನ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ. ಇದು ಒಂದು ರೀತಿಯ ಧ್ಯಾನವಿದ್ದಂತೆ. ಇದರಿಂದ ಮನಸ್ಸು ಮಗ್ನವಾಗಿ, ಸಾಂಸಾರಿಕ ಜೀವನದಲ್ಲಿ ವೈರಾಗ್ಯ ಬರುವ ಅಪಾಯವಿದೆ. ಆದರೆ ಸನ್ಯಾಸಿಗೆ ಈ ರೀತಿಯ ಯಾವ ಸಮಸ್ಯೆಯೂ ಇಲ್ಲ. ಆತ ತನ್ನ  ದೇಹ ತಡೆದುಕೊಳ್ಳುವಷ್ಟು(೧೨,೦೦೦) ಬಾರಿ ಓಂಕಾರ ಜಪ ಮಾಡಬಹುದು.