Sunday, July 8, 2012

Kathopanishad in Kannada Chapter-01 Canto-03 Shloka 9-11


ವಿಜ್ಞಾನಸಾರಥಿರ್ಯಸ್ತು ಮನಃ ಪ್ರಗ್ರಹವಾನ್ ನರಃ
ಸೋಽಧ್ವನಃ ಪಾರಮಾಪ್ನೋತಿ ತದ್ವಿಷ್ಣೋಃ ಪರಮಂ ಪದಮ್           

ನಾವು ಎಚ್ಚರದಿಂದ ನಿಯಂತ್ರಿಸಬೇಕಾದುದ್ದು  ಮನಸ್ಸು ಮತ್ತು ಬುದ್ಧಿಯನ್ನು. ಈ ಎರಡು ಹಿಡಿತದಲ್ಲಿದ್ದಾಗ ಇಂದ್ರಿಯಗಳು ತಾನೇ ತಾನಾಗಿ ಹಿಡಿತಕ್ಕೆ ಬರುತ್ತವೆ. ಈ ಹಿಂದೆ ಹೇಳಿದಂತೆ, ಮನಸ್ಸಿನ ಅಭಿಮಾನಿ ದೇವತೆ ಶಿವ. ಆದ್ದರಿಂದ ನಾವು “ನಮ್ಮ ಮನಸ್ಸು ದಾರಿ ತಪ್ಪದಂತೆ ಮಾಡು” ಎಂದು ಶಿವನಲ್ಲಿ ಪ್ರಾರ್ಥಿಸಬೇಕು. ನಂತರ “ನನಗೆ ವಿವೇಕಪ್ರಜ್ಞೆಯನ್ನು ಕೊಡು ತಾಯೇ” ಎಂದು ಸರಸ್ವತಿಯನ್ನು ಪ್ರಾರ್ಥಿಸಬೇಕು. ಇದರಿಂದ ನಮ್ಮ ಮನಸ್ಸು ಮತ್ತು ಬುದ್ಧಿ ಹಿಡಿತಕ್ಕೆ ಬರುತ್ತದೆ. ಒಮ್ಮೆ ಮನಸ್ಸು-ಬುದ್ದಿ ಹಿಡಿತಕ್ಕೆ ಬಂದಿತೆಂದರೆ ಮತ್ತೆ ಇನ್ನೇನೂ ಸಮಸ್ಯೆ ಇಲ್ಲ. ಇದರಿಂದ ನಾವು ನಮ್ಮ ಪಯಣದ ಕೊನೇಯ ಗುರಿಯಾದ ವಿಷ್ಣುವಿನ ಪರಮಪದವನ್ನು  ತಲುಪಬಹುದು.
ಇಲ್ಲಿ ‘ವಿಷ್ಣುಃ’ ಎನ್ನುವ ಭಗವಂತನ ನಾಮವನ್ನು ಬಳಸಲಾಗಿದೆ. ಸಾಮಾನ್ಯವಾಗಿ ವಿಷ್ಣುಃ ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ, ಅದರ ಸಂಸ್ಕೃತ ಪದ ವಿಷ್ಣು. ವಿಷ್ಣು ಎಂದರೆ ಸರ್ವಶಬ್ದವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ. ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತಹ ಅರ್ಥ. ಇನ್ನು ಈ ಪದವನ್ನು ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು ಎಂದರೆ-ವಿಶಿಷ್ಟವಾದ ಜ್ಞಾನ(ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ . ಎಲ್ಲರನ್ನೂ ರಕ್ಷಿಸುವ ಬಲ ಇರುವ (ಣ)ಸರ್ವಶಕ್ತ ಭಗವಂತ  ವಿಷ್ಣುಃ.

ಇಂದ್ರಿಯೇಭ್ಯಃ ಪರಾ ಹ್ಯರ್ಥಾ ಅರ್ಥೇಭ್ಯಶ್ಚ ಪರಂ ಮನಃ
ಮನಸಸ್ತು ಪರಾ ಬುದ್ಧಿರ್ಬುದ್ಧೇರಾತ್ಮಾ ಮಹಾನ್ ಪರಃ         ೧೦

ಮಹತಃ ಪರಮವ್ಯಕ್ತಮವ್ಯಕ್ತಾತ್ ಪುರುಷಃ ಪರಃ
ಪುರುಷಾನ್ನ ಪರಂ ಕಿಂಚಿತ್ ಸಾ ಕಾಷ್ಠಾ ಸಾ ಪರಾ ಗತಿಃ       ೧೧

ಭಗವಂತನ ಕಡೆಗೆ ಪಯಣಿಸುವ ಕುರಿತ ಉಪದೇಶದ ಉಪಸಂಹಾರ ರೂಪದಲ್ಲಿ ಈ ಎರಡು ಶ್ಲೋಕಗಳಿವೆ. ಇಲ್ಲಿ ಯಮ ಹೇಳುತ್ತಾನೆ: ಭಗವಂತನ ಕಡೆಗೆ ಪಯಣಿಸಲು ಮೊದಲು ಬೇಕಾಗಿರುವುದು ಸಾಧನ ಶರೀರ. ಸಾಧನಾ ಶರೀರಕ್ಕಿಂತ ಇಂದ್ರಿಯಗಳು ಮುಖ್ಯ, ಇಂದ್ರಿಯಗಳಿಗಿಂತ  ಇಂದ್ರಿಯ ವಿಷಯಗಳು ಮುಖ್ಯ, ವಿಷಯಗಳಿಗಿಂತ ಅದನ್ನು ಗ್ರಹಿಸುವ ಮನಸ್ಸು ಮುಖ್ಯ, ಮನಸ್ಸಿಗಿಂತ ಬುದ್ಧಿ ಮುಖ್ಯ, ಬುದ್ಧಿಗಿಂತ ಆತ್ಮ ಮುಖ್ಯ. ಈ ಎಲ್ಲಾ ಪರಿಕರಗಳೊಂದಿಗೆ ಭಗವಂತನನ್ನು ಸೇರಲು ತಾಯಿ-ತಂದೆಯ ಅನುಗ್ರಹ ಬಹಳ ಮುಖ್ಯ. ಪ್ರಕೃತಿ ಮಾತೆಯಾದ ಲಕ್ಷ್ಮಿ, ಪುರುಷನಾದ ನಾರಾಯಣ –ಇವರ ಅನುಗ್ರಹ ಇಚ್ಛೆ ಇಲ್ಲದೇ ನಮ್ಮ ರಥ ಗುರಿಯನ್ನು ಸೇರುವುದಿಲ್ಲ.
ಈ ಶ್ಲೋಕಗಳಲ್ಲಿ ದೇವತಾತಾರತಮ್ಯ ವಿವರಣೆ ಕೂಡಾ ಅಡಗಿದೆ. ಇಲ್ಲಿ ಹೇಳಿರುವ ಪ್ರತಿಯೊಂದು ವಿಷಯದ ಅಭಿಮಾನಿ ದೇವತೆಗಳನ್ನು ನೋಡಿದರೆ ಈ ವಿಚಾರ ತಿಳಿಯುತ್ತದೆ. ಮೊದಲಿಗೆ ಇಂದ್ರಿಯಗಳು. ಇಂದ್ರಿಯಗಳಲ್ಲಿ ಮುಖ್ಯವಾಗಿ ಎರಡು ಗುಂಪು. ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ. ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಐದು ಜ್ಞಾನೇಂದ್ರಿಯಗಳು. ಬಾಯಿ, ಕೈ, ಕಾಲು, ಪಾಯು ಮತ್ತು ಉಪಸ್ಥ ಐದು ಕರ್ಮೇಂದ್ರಿಯಗಳು. ಕಿವಿಯ ಅಭಿಮಾನಿ ದೇವತೆ ಚಂದ್ರ (೧೨ನೇ ಕಕ್ಷೆ); ತ್ವಕ್ ಅಭಿಮಾನಿ ದೇವತೆ ಕುಬೇರ(೧೮ನೇ ಕಕ್ಷೆ); ಕಣ್ಣಿನ ಅಭಿಮಾನಿ ದೇವತೆ ಸೂರ್ಯ(೧೨ನೇ ಕಕ್ಷೆ); ನಾಲಿಗೆಯ ಅಭಿಮಾನಿ ದೇವತೆ ವರುಣ (೧೩ನೇ ಕಕ್ಷೆ); ಮೂಗಿನ ಅಭಿಮಾನಿ ದೇವತೆಯರು ಅಶ್ವಿಗಳು(೧೮ನೇ ಕಕ್ಷೆ); ಮಾತಿನ ಅಭಿಮಾನಿ ದೇವತೆ ಅಗ್ನಿ (೧೫ನೇ ಕಕ್ಷೆ); ಕೈ ಯ ಅಭಿಮಾನಿ ದೇವತೆ ಇಂದ್ರ(೮ನೇ ಕಕ್ಷೆ); ಕಾಲಿನ ಅಭಿಮಾನಿ  ದೇವತೆ ಇಂದ್ರ ಪುತ್ರ ಜಯಂತ(೧೯ನೇ ಕಕ್ಷೆ); ಪಾಯು ಅಭಿಮಾನಿ ದೇವತೆ ಯಮ(೧೨ನೇ ಕಕ್ಷೆ); ಉಪಸ್ಥ ಅಭಿಮಾನಿ ದೇವತೆ ದಕ್ಷ ಪ್ರಜಾಪತಿ(೧೦ನೇ ಕಕ್ಷೆ). ಒಟ್ಟಿನಲ್ಲಿ ಇಲ್ಲಿ ೮ನೇ ಕಕ್ಷೆಯಿಂದ ೧೯ನೇ ಕಕ್ಷೆಯ ತನಕದ ದೇವತೆಗಳ ಗುಂಪನ್ನು ಕಾಣುತ್ತೇವೆ.
ಇಂದ್ರಿಯಗಳ ನಂತರ ಇಂದ್ರಿಯ ವಿಷಯಗಳು. ಇಂದ್ರಿಯ ವಿಷಯಗಳು ಹತ್ತು.  ಗಂಧ, ರಸ, ರೂಪ, ಸ್ಪರ್ಶ, ಶಬ್ದ, ವಾಕ್, ಪಾಣಿ, ಪಾದ, ಪಾಯು(ವಿಸರ್ಗ) ಮತ್ತು ಉಪಸ್ಥ(ಸಂತಾನ). ಶಬ್ದ ಮತ್ತು ಸ್ಪರ್ಶದ ಅಭಿಮಾನಿ ದೇವತೆ ಗರುಡ ಪತ್ನಿ ಸುಪರ್ಣಿ, ರೂಪ ಮತ್ತು ಸ್ಪರ್ಶದ ಅಭಿಮಾನಿ ದೇವತೆ ಶೇಷ ಪತ್ನಿ ವಾರುಣಿ, ಗಂಧದ ಅಭಿಮಾನಿ ದೇವತೆ ಶಿವ ಪತ್ನಿ ಪಾರ್ವತಿ. ಅದೇ ರೀತಿ ವಾಕ್ ಮತ್ತು ಪಾಣಿ  ಅಭಿಮಾನಿ ಸುಪರ್ಣಿ, ಪಾದ ಮತ್ತು ವಿಸರ್ಗ ಅಭಿಮಾನಿ ದೇವತೆ ವಾರುಣಿ, ಸಂತಾನದ ಅಭಿಮಾನಿ ದೇವತೆ ಪಾರ್ವತಿ. ಈ ಮೂವರೂ ೭ನೇ ಕಕ್ಷೆಯ ದೇವತೆಗಳು.
ಇಂದ್ರಿಯ ವಿಷಯಗಳ ನಂತರ ವೇದ ವಿದ್ಯೆಯ ಅರಿವಿನ ಅಭಿಮಾನಿ ದೇವತೆ ಗರುಡ; ಇತರ ವಿದ್ಯೆಯ ಅರಿವಿನ ಅಭಿಮಾನಿ ದೇವತೆ ಶೇಷ ಮತ್ತು ಮನೋಭಿಮಾನಿ ದೇವತೆ ಶಿವ. ಈ ಮೂವರೂ ಕೂಡ ೫ನೇ ಕಕ್ಷೆಯ ದೇವತೆಗಳು. ಮನಸ್ಸಿನ ನಂತರ ಬುದ್ದಿ. ಸರಸ್ವತಿ ಮತ್ತು ಭಾರತೀಯರು ಬುದ್ಧಿಯ ಅಭಿಮಾನಿ ದೇವತೆಗಳು. ಇವರು ನಾಲ್ಕನೇ  ಕಕ್ಷೆಯ ದೇವತೆಗಳು. ಬುದ್ಧಿಯ ನಂತರ ಆತ್ಮ. ಜೀವ ಸ್ವರೂಪಾಭಿಮಾನಿಯಾರಾದ ಬ್ರಹ್ಮ-ವಾಯು ಆತ್ಮದ ಅಭಿಮಾನಿ ದೇವತೆಗಳಾಗಿ  ಮೂರನೇ ಕಕ್ಷೆಯಲ್ಲಿದ್ದಾರೆ. ಇವರಿಗಿಂತ ಮೇಲೆ ಅವ್ಯಕ್ತ ತತ್ವ, ಪ್ರಕೃತಿ ಮಾತೆ ಶ್ರೀಲಕ್ಷ್ಮಿ. ಲಕ್ಷ್ಮೀಪತಿ ಭಗವಂತ ಸರ್ವೋತ್ತಮ ತತ್ವ. “ಅದಕ್ಕಿಂತ ಎತ್ತರದ ಇನ್ನೊಂದು ತತ್ವವಿಲ್ಲ” ಎಂದಿದ್ದಾನೆ ಯಮ. ಅದು ಎತ್ತರದ ತುತ್ತತುದಿ. ಈ ತಾರತಮ್ಯಕ್ಕೆ ಅನುಗುಣವಾಗಿ ಭಗವಂತನ ಪರಿವಾರದ ಚಿಂತನೆ ಮಾಡಿ, ತುತ್ತತುದಿಯಲ್ಲಿರುವ ಭಗವಂತನ ಉಪಸನೆಯೇ ನಮ್ಮ ಧ್ಯಾನವಾಗಬೇಕು.               

No comments:

Post a Comment