Monday, April 23, 2012

Katopanishad kannada ch-01 canto-2 shloka 01-03


ಅಧ್ಯಾಯ-೧

ವಲ್ಲೀ-೨

ನಚಿಕೇತನ ಅಧ್ಯಾತ್ಮನಿಷ್ಠೆ, ತಿಳಿಯಲೇಬೇಕು ಎನ್ನುವ ಛಲವನ್ನು ಕಂಡು ಯಮನಿಗೆ ಬಹಳ ಸಂತೋಷವಾಯಿತು. ಇಷ್ಟು ನಿಷ್ಪ್ರಹತೆಯಿಂದ ಕೇವಲ ಜ್ಞಾನಕ್ಕೋಸ್ಕರ ಜ್ಞಾನ ಬೇಕು', ಇನ್ನೇನೂ ಬೇಡ ಎನ್ನುವ ಇಂಥಹ ವಿದ್ಯಾರ್ಥಿಯನ್ನು ಕಂಡ ಯಮ ಬಹಳ ಸುಂದರವಾದ ಮಾತೊಂದನ್ನು ಹೇಳುತ್ತಾನೆ:

ಅನ್ಯಚ್ಛ್ರೇಯೋಽನ್ಯದುತೈವ ಪ್ರೇಯಸ್ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ
ತಯೋಃ ಶ್ರೇಯ ಆದದಾನಸ್ಯ ಸಾಧು  ಭವತಿ ಹೀಯತೇಽರ್ಥಾದ್ಯ ಉ ಪ್ರೇಯೋ ವೃಣೀತೇ

ಯಮ ಹೇಳುತ್ತಾನೆ: ಮನುಷ್ಯನನ್ನು ಮುಖ್ಯವಾಗಿ ಕಾಡುವ ಸಂಗತಿಗಳು ಎರಡು. ಒಂದು ಶ್ರೇಯಸ್ಸು ಹಾಗೂ ಇನ್ನೊಂದು ಪ್ರೇಯಸ್ಸು. ನಮಗೆ ಒಳಿತನ್ನುಂಟುಮಾಡುವುದು ಮತ್ತು ಹಿತವಾದದ್ದು ಶ್ರೇಯಸ್ಸು. ನಮಗೆ ಪ್ರಿಯವಾದದ್ದು  ಆದರೆ ನಶ್ವರವಾದದ್ದು ಪ್ರೇಯಸ್ಸು. ಉದಾಹರಣೆಗೆ ಒಬ್ಬ ಸಕ್ಕರೆ ಖಾಯಿಲೆಯುಳ್ಳ ರೋಗಿಗೆ ಕಹಿ ಮದ್ದು ಶ್ರೇಯಸ್ಸು, ಆದರೆ ಸಿಹಿ ತಿಂಡಿ ಪ್ರೇಯಸ್ಸು. ಈ ಶ್ರೇಯಸ್ಸು ಮತ್ತು ಪ್ರೇಯಸ್ಸು ಮನುಷ್ಯನನ್ನು ಕಟ್ಟಿಹಾಕುತ್ತವೆ. ಮನುಷ್ಯ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ದ್ವಂದ್ವದಲ್ಲಿ ಬದುಕುತ್ತಾನೆ. ಕೆಲವರು ಶ್ರೇಯಸ್ಸಿನ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಸುಖಮಯವಾದ ಮೊಕ್ಷಾಂತವಾದ ಫಲ ಸಿಗುತ್ತದೆ. ಇದನ್ನು ಬಿಟ್ಟು ಚಪಲಕ್ಕೆ ಬಿದ್ದು ಶ್ರೇಯಸ್ಸಿನ ಬದಲು ಪ್ರೆಯಸ್ಸಿನ ಮಾರ್ಗವನ್ನು ತುಳಿದವನು ತನ್ನ ಜೀವನದ ಅರ್ಥವನ್ನು ಕಳೆದುಕೊಳ್ಳುತ್ತಾನೆ ಮತ್ತು ಇಡೀ ಜೀವನವನ್ನು ವ್ಯರ್ಥ ಮಾಡಿಕೊಳ್ಳುತ್ತಾನೆ. 

ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಸ್ತೌ ಸಂಪರೀತ್ಯ ವಿವಿನಕ್ತಿ ಧೀರಃ
ಶ್ರೇಯೋ ಹಿ ಧೀರೋಽಭಿಪ್ರೇಯಸೋ ವೃಣೀತೇ ಪ್ರೇಯೋ ಮಂದೋ ಯೋಗಕ್ಷೇಮಾದ್ವೃಣೀತೇ

ಸಾಮಾನ್ಯವಾಗಿ ಈ ಶ್ರೇಯಸ್ಸು ಮತ್ತು ಪ್ರೇಯಸ್ಸು ಮನುಷ್ಯನ ತಲೆಯಲ್ಲಿ ಕೂತು ಆತನನ್ನು ಕಾಡುತ್ತವೆ. ಆಗ ಬುದ್ಧಿವಂತನಾದವನು, ಯಾವುದು ಬೇಕು, ಯಾವುದು ಬೇಡ ಎಂದು ಚನ್ನಾಗಿ ವಿಶ್ಲೇಷಣೆ ಮಾಡಿ ವಿವೇಕದಿಂದ ತೀರ್ಮಾನ ತೆಗೆದುಕೊಳ್ಳುತ್ತಾನೆ. ಈತ ಧೈರ್ಯಶಾಲಿಯಾಗಿರುತ್ತಾನೆ. ನನಗೆ ಹಿತವಾದದ್ದು ಬೇಕು, ಇಷ್ಟವಾದದ್ದು ಬೇಡ, ನಾನು ಈ ಆಕರ್ಷಣೆಗೆ ಒಳಗಾಗಬಾರದು ಎನ್ನುವ  ವಿವೇಕ ಈತನಲ್ಲಿರುತ್ತದೆ. ಇದು ಬಹಳ ಕಷ್ಟ. ಸಾಮಾನ್ಯವಾಗಿ ಮನುಷ್ಯನಿಗೆ ಕೆಟ್ಟದ್ದು ಯಾವುದು ಎನ್ನುವುದು  ಗೊತ್ತಿರುತ್ತದೆ. ಆದರೆ ಗೊತ್ತಿದ್ದೂ ಆ ದಾರಿಯಲ್ಲಿ ಹೋಗಿ ಬಲಿ ಬೀಳುವವರೇ ಹೆಚ್ಚು. ಇದಕ್ಕೆ ಕಾರಣ ಪ್ರೇಯಸ್ಸಿನ ಸೆಳೆತ. ಜ್ಞಾನಿಯಾದವನು ಇಂಥಹ ಸೆಳೆತವನ್ನು ಮೀರಿ ನಾನು ಒಳ್ಳೆಯ ದಾರಿ ಹಿಡಿಯಬೇಕು ಎಂದು ತೀರ್ಮಾನ ಮಾಡಿ, ಧೈರ್ಯದಿಂದ ಶ್ರೇಯಸ್ಸಿನ ಮಾರ್ಗದಲ್ಲಿ ಸಾಗುತ್ತಾನೆ. ಆದರೆ ಬುದ್ಧಿಗೇಡಿ(ಮಂದ) ಪ್ರೇಯಸ್ಸಿನ ತಾತ್ಕಾಲಿಕ ಸೆಳೆತಕ್ಕೆ ಒಳಗಾಗಿ ತನ್ನ ಬಾಳನ್ನು ಹಾಳು ಮಾಡಿಕೊಳ್ಳುತ್ತಾನೆ. ಆತ ಜೀವನವೆಂದರೆ ಆದಾಯ-ವ್ಯಯ,  ಗಳಿಸುವುದು-ಗಳಿಸಿದ್ದನ್ನು ಉಳಿಸುವುದು-ಇಷ್ಟೇ ಎಂದು ತಿಳಿದು ಹಿತವಾದದ್ದನ್ನು ಬಿಟ್ಟು ಪ್ರಿಯವಾದುದರ ಬೆನ್ನು ಹತ್ತುತ್ತಾನೆ.
ಇಲ್ಲಿ ಯೋಗ-ಕ್ಷೇಮ ಎನ್ನುವ ಪದ ಬಳಕೆಯಾಗಿದೆ. ಇಲ್ಲದ್ದನ್ನು ಗಳಿಸುವುದು ಯೋಗ, ಗಳಿಸಿದ್ದನ್ನು ಉಳಿಸುವುದು ಕ್ಷೇಮ. ಅಪ್ರಾಪ್ತಸ್ಯ ಪ್ರಾಪ್ತಿಃ ಯೋಗಃ, ಪ್ರಾಪ್ತಸ್ಯ ಪರಿರಕ್ಷಣಂ ಕ್ಷೇಮಃ. ನಾವು ‘ಗಳಿಸಿದರೆ ಗಳಿಸಬೇಕು ಜ್ಞಾನವನ್ನು. ಉಳಿಸಿದರೆ ಉಳಿಸಬೇಕು ಯೋಗ ವಿದ್ಯೆಯನ್ನು’. ಇದನ್ನು ಬಿಟ್ಟು ಕೇವಲ ಹಣವನ್ನು ಗಳಿಸುವುದು ಮತ್ತು ಅದನ್ನು ಉಳಿಸುವುದು ಮಾಡುತ್ತಾ, ಇದ್ದ ಸುಖವನ್ನು ಮರೆತು, ಸುಖದ ನಿರೀಕ್ಷೆಯಲ್ಲೇ ಬದುಕಿದರೆ ಜೀವನ ವ್ಯರ್ಥ. ಇಲ್ಲಿ ನಚಿಕೇತ ಈ ಎಲ್ಲಾ ವಿಚಾರವನ್ನೂ ತಿಳಿದಿದ್ದ. ಆದ್ದರಿಂದ  ಆತ ಯಾವುದೇ ಪ್ರಲೋಭನೆಗೆ ಒಳಗಾಗಲಿಲ್ಲ.

ಸ ತ್ವಂ ಪ್ರಿಯಾನ್ ಪ್ರಿಯರೂಪಾಂಶ್ಚ ಕಾಮಾನ್ ಅಭಿಧ್ಯಾಯನ್ ನಚಿಕೇತೋಽತ್ಯಸ್ರಾಕ್ಷೀಃ
ನೈತಾಂ ಸೃಂಕಾಂ ವಿತ್ತಮಯೀಮವಾಪ್ತೋ ಯಸ್ಯಾಂ ಮಜ್ಜಂತಿ ಬಹವೋ ಮನುಷ್ಯಾಃ  

ಯಮ ಹೇಳುತ್ತಾನೆ: ಹೇಗೆ ಹೆಚ್ಚಿನ ಮನುಷ್ಯರು ಪ್ರಿಯವಾದುದರ ಹಿಂದೆ ಹೋಗುತ್ತಾರೋ ಹಾಗೆ ನೀನು ಹೋಗಲಿಲ್ಲ. ಪ್ರಿಯರೂಪವಾದ ಕಾಮನೆಗಳನ್ನು ಒಳ-ಹೊರಗು ಯೋಚನೆ ಮಾಡಿ ಅದರಲ್ಲಿರುವ ಗುಣದೋಷವನ್ನು ಧ್ಯಾನ ಮಾಡಿ, ಪ್ರೇಯಸ್ಸನ್ನು ಗುರುತಿಸಿ ಅದನ್ನು ತೊರೆದುಬಿಟ್ಟೆ. ನಾನು ಕೊಟ್ಟ ಬಂಗಾರದ ಹಾರವನ್ನೂ ಕೂಡ ನೀನು ಬೇಡವೆಂದೆ. ಮೆಚ್ಚತಕ್ಕಂತಹ  ಹಿರಿಮೆ ನಿನ್ನದು-ಎಂದು ಯಮ ನಚಿಕೇತನನ್ನು ಪ್ರಶಂಸಿಸುತ್ತಾನೆ.

Thursday, April 19, 2012

Kathopanishad in Kannada Ch-01 Canto-01 Shloka-20-29

ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇSಸ್ತೀತ್ಯೇಕೇ ನಾಯಮಸ್ತೀತಿ ಚೈಕೇ
ಏತದ್ವಿದ್ಯಾಮನುಶಿಷ್ಟಸ್ತ್ವಯಾSಹಂವರಾಣಾಮೇಷ ವರಸ್ತೃತೀಯಃ                             ೨೦
ಮೂರನೇ ವರವಾಗಿ ನಚಿಕೇತ ಇಡೀ ಮನುಕುಲವನ್ನು ಯಾವಾಗಲೂ ಕಾಡುತ್ತಿರುವ ಒಂದು ವಿಶಿಷ್ಠವಾದ ಪ್ರಶ್ನೆಯನ್ನು ಯಮನ ಮುಂದಿಡುತ್ತಾನೆ. ಇಡೀ ವೈದಿಕ ಚಿಂತನೆಯಲ್ಲಿ ಈ ವಿಷಯ ಇನ್ನೆಲ್ಲೂ ಸಿಗುವುದಿಲ್ಲ. ಅಂಥಹ ಅಪೂರ್ವ ವಿಷಯದ ಬಗ್ಗೆ ಇಲ್ಲಿ ಯಮನಲ್ಲಿ ಪ್ರಶ್ನೆ ಹಾಕುತ್ತಿದ್ದಾನೆ ನಚಿಕೇತ. ಮೇಲ್ನೋಟದಲ್ಲಿ ಈ ಶ್ಲೋಕವನ್ನು ನಾವು ನೋಡಿದರೆ ನಮಗೆ ನಚಿಕೇತನ ಪ್ರಶ್ನೆ ತುಂಬಾ ಸರಳ ಎನಿಸುತ್ತದೆ. ಆದರೆ ಈ ಪ್ರಶ್ನೆಗೆ ಯಮನ ಉತ್ತರವನ್ನು ನೋಡಿದಾಗ ಇಲ್ಲಿ ಕಾಣುವ ಮೇಲ್ನೋಟದ ಅರ್ಥ ನಚಿಕೇತನ ಮೂಲ ಪ್ರಶ್ನೆ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಮೇಲ್ನೋಟಕ್ಕೆ ಈ ಶ್ಲೋಕವನ್ನು ನೋಡಿದರೆ: ‘ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ’ – ಸತ್ತ ಮನುಷ್ಯನ ಬಗೆಗೆ ಒಂದು ಸಂದೇಹವಿದೆ; ‘ಅಸ್ತೀತ್ಯೇಕೇ ನಾಯಮಸ್ತೀತಿ ಚೈಕೇ’-ಕೆಲವರು ಹೇಳುತ್ತಾರೆ ಸತ್ತ ಮೇಲೆ ಅಸ್ತಿತ್ವ ಇದೆ ಎಂದು, ಇನ್ನು ಕೆಲವರು ಇಲ್ಲ ಎಂದು; ‘ಏತದ್ವಿದ್ಯಾಮನುಶಿಷ್ಟಸ್ತ್ವಯಾSಹಂ’- ಇದರ ಕುರಿತು ಶಾಸ್ತ್ರಕ್ಕನುಗುಣವಾಗಿ ನಾನು ನಿನ್ನಿಂದ ಕೇಳಿ ತಿಳಿದುಕೊಳ್ಳಬೇಕು’-ಇದು ಮೇಲ್ನೋಟದ ಅರ್ಥ. ಆದರೆ ಈ ರೀತಿ ಈ ಶ್ಲೋಕವನ್ನು ಬಿಡಿಸುವುದು ತಪ್ಪು. ಏಕೆಂದರೆ ಇಲ್ಲಿ ನಚಿಕೇತ ಸತ್ತು ಯಮಲೋಕದಲ್ಲಿದ್ದಾನೆ. ಆದ್ದರಿಂದ ಸತ್ತ ಮೇಲೆ ಅಸ್ತಿತ್ವವಿದೆಯೋ ಅನ್ನುವ ಪ್ರಶ್ನೆಯೇ ಇಲ್ಲಿ ಅಸಂಗತ. ಯಮಲೋಕ ಪಯಣದಲ್ಲಿ ಜೀವಗಳ ಪ್ರವಾಹವನ್ನು ನಚಿಕೇತ ನೋಡಿದ್ದಾನೆ. ಹಾಗಿರುವಾಗ ದೇಹಕ್ಕಿಂತ ಬೇರೆಯಾದ ಅತ್ಮವಿದೆಯೋ ಎಂದು ಆತ ಪ್ರಶ್ನೆ ಹಾಕುವ ಸಾಧ್ಯತೆಯೇ ಇಲ್ಲ.  ಹಾಗಾಗಿ ಇಲ್ಲಿರುವ ನಿಜವಾದ ಮೂಲ ಅರ್ಥ ತಿಳಿಯಲು ನಾವು ಈ ಶ್ಲೋಕವನ್ನು ಬೇರೆ ಆಯಾಮದಲ್ಲಿ ನೋಡಬೇಕು.
‘ಯೇಯಂ ಪ್ರೇತೇ ವಿಚಿಕಿತ್ಸಾ ಮನುಷ್ಯೇ’ ಎನ್ನುವಲ್ಲಿ ‘ಪ್ರೇತ’ ಎನ್ನುವ ಪದದ ಅರ್ಥ ಸತ್ತ ಜೀವವಲ್ಲ. ಸಂಸ್ಕೃತದಲ್ಲಿ ಪ್ರೇತ ಎಂದರೆ ಎತ್ತರಕ್ಕೆ ಏರಿದವನು(ಪ್ರಕೃಷ್ಟಂ ಏತಃ-ಪ್ರೇತಃ) ಅಥವಾ  ಮೇಲಕ್ಕೆ ಹೋದವನು ಎಂದರ್ಥ. ಮೇಲಕ್ಕೆ ಅಂದರೆ ಪುಣ್ಯಲೋಕಕ್ಕೆ ಹೋಗುವುದು. ಪುಣ್ಯಲೋಕದಲ್ಲಿ ಕೊನೆಯ ಎತ್ತರ-ಮೋಕ್ಷ. ಆದ್ದರಿಂದ ಇಲ್ಲಿ ಪ್ರೇತಃ ಅಂದರೆ ಮೋಕ್ಷವನ್ನು ಪಡೆದಿರತಕ್ಕವ. ಇನ್ನು ‘ಮನುಷ್ಯ’ ಎಂದರೆ ಕೇವಲ ಮಾನವ ಅಲ್ಲ. ಮನನಶೀಲವಾದ ಜೀವ-ಮನುಷ್ಯ[ಮಾನವರು, ದೇವತಗಳು, ಇತ್ಯಾದಿ] . ವಿಚಿಕಿತ್ಸೆ- ಎಂದರೆ ವಿಚಾರಣೆ ಅಥವಾ ಚರ್ಚೆ. ‘ಅಸ್ತೀತ್ಯೇಕೇ ನಾಯಮಸ್ತೀತಿ ಚೈಕೇ’ ಎನ್ನುವಲ್ಲಿ ‘ಅಸ್ತಿ’ ಅನ್ನುವುದಕ್ಕೆ ವಿಶೇಷ ಅರ್ಥವಿದೆ. ಅಸ್ತಿ ಅಂದರೆ ಎಲ್ಲಕ್ಕಿಂತ ಶ್ರೇಷ್ಠವಾದ ವಸ್ತು- ಅಂದರೆ ಭಗವಂತ. ಈ ಎಲ್ಲಾ ಅರ್ಥದೊಂದಿಗೆ ಈ ಶ್ಲೋಕವನ್ನು ನೋಡಿದರೆ ಆಗ ನಮಗೆ ನಚಿಕೇತನ ಮೂಲ ಪ್ರಶ್ನೆ ಏನು ಎನ್ನುವುದು ಅರ್ಥವಾಗುತ್ತದೆ.
 “ಸತ್ತ ಜೀವಕ್ಕೆ ಭಗವಂತನ ನಿಯಮನ ಹೇಗೆ?  ಭಗವಂತ ಮೊಕ್ಷದಲ್ಲೂ ನಿಯಾಮಕನಾಗಿರುತ್ತಾನೆ ಎನ್ನುತ್ತಾರೆ ಜ್ಞಾನಿಗಳು, ಇಲ್ಲ ಎನ್ನುತ್ತಾರೆ ಇನ್ನು ಕೆಲವರು. ಹೀಗಿರುವಾಗ ಮೋಕ್ಷದಲ್ಲಿ ಭಗವಂತ ಜೀವನನ್ನು ನಿಯಂತ್ರಿಸುವ ಬಗೆ ಎಂಥದ್ದು? ಮೋಕ್ಷದಲ್ಲಿ ಭಗವಂತನ ಪ್ರೇರಣೆ ಹೇಗಿರುತ್ತದೆ? ಭಗವಂತನ ಧಾರಕಶಕ್ತಿಯನ್ನು ಚನ್ನಾಗಿ ತಿಳಿದ, ಧರ್ಮನಿಯಾಮಕನಾದ ನೀನು, ಇದನ್ನು ಶಾಸ್ತ್ರಕ್ಕೆ ಅನುಗುಣವಾಗಿ ನನಗೆ ಅನುಭವವಾಗುವಂತೆ ಅನುಭವಿಸಿ ಹೇಳು. ಇದು ನಾನು ಕೇಳಬೇಕಾದ ಮೂರನೆಯ ಹಾಗೂ ಕೊನೆಯ ವರ.” ಎಂದು ನಚಿಕೇತ ತನ್ನ ಪ್ರಶ್ನೆಯನ್ನು ಯಮನ ಮುಂದಿಡುತ್ತಾನೆ.
ಅಧ್ಯಾತ್ಮ ವಿದ್ಯೆಯಲ್ಲಿ ಮನುಷ್ಯ ತಿಳಿಯಬೇಕಾದ ಅತ್ಯಂತ ಶ್ರೇಷ್ಠ ವಿಚಾರವಿದು. ಸತ್ತ ನಂತರ ಜೀವ ಮತ್ತು ಭಗವಂತನ ಸಂಬಂಧ, ಮುಕ್ತಿಯಲ್ಲಿ ಭಗವಂತ ಜೀವನನ್ನು ನಿಯಮಿಸುವ ನಡೆ –ಎಲ್ಲವೂ ಬಹಳ ನಿಗೂಢ. ಮೋಕ್ಷವನ್ನು ಕಾಣದವ ಇದನ್ನು ವಿವರಿಸಲಾರ, ಮೋಕ್ಷವನ್ನು ಸೇರಿದವ ಮರಳಿ ಬಂದು ಹೇಳಲಾರ. ಹೀಗಿರುವಾಗ ಈ ವಿಚಾರ ಬಹಳ ರಹಸ್ಯ. ಇಂಥಹ ನಿಗೂಢವಾದ ವಿಷಯವನ್ನು ಯೋಗ್ಯರಲ್ಲದವರಿಗೆ ಯಾರೂ ಹೇಳುವುದಿಲ್ಲ. ಆದ್ದರಿಂದ ಇಲ್ಲಿ ಯಮ ನೇರವಾಗಿ ನಚಿಕೇತನ ಪ್ರಶ್ನೆಗೆ ಉತ್ತರಿಸದೆ, ಆತನ ಯೋಗ್ಯತೆಯನ್ನು ಮತ್ತೆ ವಿವಿಧ ರೀತಿಯಿಂದ ಪರೀಕ್ಷಿಸುವುದನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.
ದೇವೈರತ್ರಾಪಿ ವಿಚಿಕಿತ್ಸಿತಂ ಪುರಾ  ನ ಹಿ ಸುವಿಜ್ಞೇಯಮಣುರೇಷ ಧರ್ಮಃ
ಅನ್ಯಂ ವರಂ ನಚಿಕೇತೋ ವೃಣೀಷ್ವ  ಮಾ ಮೋಪರೋತ್ಸೀರತಿ ಮಾ ಸೃಜೈನಂ          ೨೧
ಯಮ ಹೇಳುತ್ತಾನೆ: “ನೀನು ಕೇಳಿದ ವಿಚಾರ ದೇವತೆಗಳಿಗೂ ಪೂರ್ಣವಾಗಿ ತಿಳಿದಿಲ್ಲ. ಈ ಬಗ್ಗೆ ದೇವಲೋಕದಲ್ಲಿ ನಿರಂತರ ಚರ್ಚೆ ನಡೆದಿದೆ” ಎಂದು. ಇಲ್ಲಿ ‘ನ ಹಿ ಸುವಿಜ್ಞೇಯಮಣುರೇಷ ಧರ್ಮಃ’ ಎನ್ನುವಲ್ಲಿ ‘ಧರ್ಮಃ’ ಅನ್ನುವುದನ್ನು ದೇವರು ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ‘ಧಾರಯತಿ ಇತಿ ಧರ್ಮಃ’. ಯಾವುದು ನಮ್ಮನ್ನು ಧಾರಣೆ ಮಾಡುತ್ತದೋ ಅದು ಧರ್ಮ. ನಮ್ಮ ಪ್ರಾಮಾಣಿಕ ಬದುಕು ನಮ್ಮನ್ನು ಧಾರಣೆ ಮಾಡಿ ಬಾಳಿನಲ್ಲಿ ಕುಸಿಯದಂತೆ ಮಾಡಿ ಎತ್ತರಕ್ಕೆರಲು ಸಹಾಯ ಮಾಡುತ್ತದೆ. ಅದು ಧರ್ಮ. ಎಲ್ಲವನ್ನೂ(ಇಡೀ ವಿಶ್ವವನ್ನು) ಧಾರಣೆ ಮಾಡಿದ ಆ ಭಗವಂತನನ್ನು ಶಾಸ್ತ್ರಕಾರರು ಧರ್ಮಃ ಎಂದು ಕರೆಯುತ್ತಾರೆ. ವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು ‘ಧರ್ಮೋ ಧರ್ಮವಿದುತ್ತಮಃ’ ಎಂದು ಕರೆದಿದ್ದಾರೆ. ಇಂಥಹ ಸ್ಥೂಲ ಪ್ರಪಂಚವನ್ನು ಧಾರಣೆ ಮಾಡಿದ ಭಗವಂತ ಸೂಕ್ಷ್ಮಾತಿ-ಸೂಕ್ಷ್ಮ. ಅದು ನಮ್ಮ ಬುದ್ಧಿಗೆ ನಿಲುಕಲಾರದ ಸಂಗತಿ. “ಇದನ್ನು ದೇವತೆಗಳೂ ಪೂರ್ಣ ಗ್ರಹಿಸಲಾರರು. ಹೀಗಿರುವಾಗ ನೀನು ತಿಳಿಯುವುದು ಕಷ್ಟ. ಹಾಗಾಗಿ ಈ ವರವನ್ನು ಬಿಟ್ಟು ಬೇರೆ ಏನಾದರೂ ವರವನ್ನು ಕೇಳು” ಎನ್ನುತ್ತಾನೆ ಯಮ. “ನನ್ನನ್ನು ಬಲವಂತ ಮಾಡಬೇಡ, ನನಗಾಗಿ ಈ ಪ್ರಶ್ನೆಯನ್ನು ಬಿಟ್ಟುಬಿಡು-ಬೇರೆ ಏನಾದರೂ ವರವನ್ನು ಕೇಳು” ಎಂದು ಯಮ ಹೇಳಿದಾಗ ನಚಿಕೇತ ಹೇಳುತ್ತಾನೆ:     
ದೇವೈರತ್ರಾಪಿ ವಿಚಿಕಿತ್ಸಿತಂ ಕಿಲ  ತ್ವಂ ಚ ಮೃತ್ಯೋ ಯನ್ನ ಸುಜ್ಞೇಯಮಾತ್ಥ
ವಕ್ತಾ ಚಾಸ್ಯ ತ್ವಾದೃಗನ್ಯೋ ನ ಲಭ್ಯೋ  ನಾನ್ಯೋ ವರಸ್ತುಲ್ಯ ಏತಸ್ಯ ಕಶ್ಚಿತ್                         ೨೨

ದೇವತೆಗಳಿಗೂ ಪೂರ್ಣ ತಿಳಿಯದ ವಿಷಯವೊಂದನ್ನು ನಾನು ನಿನ್ನಲ್ಲಿ ಕೇಳಿದ್ದೇನೆ. ನೀನು ಲೋಕದ ಧರ್ಮಾಧರ್ಮವನ್ನು ತೀರ್ಮಾನ ಮಾಡುವ ದೊಡ್ಡ ದೇವತೆ. ಹಾಗಿರುವಾಗ ಇಂಥಹ ನಿಗೂಢ ವಿಷಯವನ್ನು ತಿಳಿದ ನಿನ್ನ ಬಳಿ ಬಂದ ನಾನು ಈ ವಿಷಯವನ್ನು ತಿಳಿದುಕೊಳ್ಳದೆ ಹೋದರೆ ಮೂರ್ಖನಾದಂತೆ. ನಿಜವಾಗಿ ಭಗವಂತನನ್ನು ಕಂಡು ಸಾಕ್ಷಾತ್ಕಾರ ಪಡೆದ ಒಬ್ಬ ಉಪಾಧ್ಯಾಯ ಇಂದು ನನಗೆ ಸಿಕ್ಕಿದ್ದಾನೆ. ಹಾಗಿರುವಾಗ ಈ ಜ್ಞಾನದಿಂದ ನಾನು ವಂಚಿತನಾಗಲಾರೆ.  ಇದಕ್ಕೆ ಸಮನಾದ ಇನ್ನೊಂದು ವರವೇ ಇಲ್ಲ. ಆದ್ದರಿಂದ ನಾನು ಬೇರೆ ವರ ಕೇಳಲಾಗದು-ಎನ್ನುತ್ತಾನೆ ನಚಿಕೇತ.
ಶತಾಯುಷಃ ಪುತ್ರಪೌತ್ರಾನ್ ವೃಣೀಷ್ವಾ  ಬಹೂನ್ ಪಶೂನ್ ಹಸ್ತಿಹಿರಣ್ಯಮಶ್ವಾನ್
ಭೂಮೇರ್ಮಹದಾಯತನಂ ವೃಣೀಷ್ವ   ಸ್ವಯಂ ಚ ಜೀವ ಶರದೋ ಯಾವದಿಚ್ಛಸಿ        ೨೩
ನಚಿಕೇತ ತಾನು ಕೇಳಿದ ಈ ಮೂರನೇ ವರಕ್ಕೆ ಸಮನಾದ ಬೇರೊಂದು ವರವೇ ಇಲ್ಲ ಎಂದು ಹೇಳಿದಾಗ ಯಮ ಹೇಳುತ್ತಾನೆ: “ಒಂದಲ್ಲದಿದ್ದರೆ ಅನೇಕ ವರವನ್ನು ಕೇಳು” ಎಂದು. ಇಲ್ಲಿ ನಚಿಕೇತನಿಗೆ ಯಮ ಲೌಕಿಕ ಪ್ರಲೋಭನೆ ಮಾಡುತ್ತಿರುವುದನ್ನು ನಾವು ಗಮನಿಸಬೇಕು. ಯಮ ಹೇಳುತ್ತಾನೆ: “ನಿನಗೆ ಧೀರ್ಘಾಯಸ್ಸು ಪಡೆದ ಮಕ್ಕಳು, ಮೊಮ್ಮಕ್ಕಳು ಬೇಕಿದ್ದರೆ ಕೇಳು, ಮನೆ ತುಂಬಾ ಹಾಲು ಮೊಸರು ಕೊಡುವಂಥಹ ಗೋವುಗಳನ್ನು ಕೇಳು, ಅಶ್ವ, ಆನೆ, ಬಂಗಾರದ ರಾಶಿಯನ್ನು ಕೇಳು, ನಿನಗೆಷ್ಟು ಭೂಮಿ ಬೇಕೋ ಅದನ್ನು ಕೇಳು; ನಿನಗೆ ಎಷ್ಟು ಸಮಯ ಬದುಕಬೇಕೋ ಅಷ್ಟು ಆಯಸ್ಸನ್ನು ಕೊಡುತ್ತೇನೆ. ಜೀವನದಲ್ಲಿ ಒಬ್ಬ ಸಂಸಾರಿ ಬಯಸುವ ಎಲ್ಲವನ್ನೂ ಕೇಳು- ಕೊಡುತ್ತೇನೆ, ಆದರೆ ಈ ಪ್ರಶ್ನೆಯನ್ನು ಬಿಟ್ಟುಬಿಡು. 
ಏತತ್ತುಲ್ಯಂ ಯದಿ ಮನ್ಯಸೇ ವರಂ  ವೃಣೀಷ್ವ ವಿತ್ತಂ ಚಿರಜೀವಿಕಾಂ ಚ
ಮಹಾಭೂಮೌ ನಚಿಕೇತಸ್ತ್ವಮೇಧಿ  ಕಾಮಾನಾಂ ತ್ವಾ ಕಾಮಭಾಜಂ ಕರೋಮಿ          ೨೪
ಮುಂದುವರಿದು ಯಮ ಹೇಳುತ್ತಾನೆ: ನೀನು ಕೇಳಿದ ಒಂದು ವರಕ್ಕೆ ಲೌಕಿಕವಾಗಿ ಒಬ್ಬ ಮನುಷ್ಯ ಎಷ್ಟು ಬಯಸುತ್ತಾನೋ ಅಷ್ಟನ್ನು ಬೇಡಿಕೋ. ಇಲ್ಲ ಇದೂ ಕಡಿಮೆ ಎನಿಸಿದರೆ- ಇಡೀ ಬ್ರಹ್ಮ ಕಲ್ಪದಲ್ಲಿ ಪೂರ್ತಿ ಜೀವಿಸಲು ಬಯಸು-ಅದನ್ನು ಕೊಡುತ್ತೇನೆ, ಇಡೀ ಭೂಮಂಡಲದ ಚಕ್ರವರ್ತಿಯಾಗಬಯಸುವುದಾದರೆ ಅದನ್ನು ಕೇಳು. ಯಾವ ಚಕ್ರವರ್ತಿಯೂ ಸೇರದ ಎತ್ತರವನ್ನು ನೀನು ಸೇರುವಂತೆ ಮಾಡುತ್ತೇನೆ. ಯಾವಯಾವ ಕಾಮನೆಗಳಿವೆ ಅವೆಲ್ಲವೂ ಬಯಸಿದಾಗ ಕೈಸೇರುವಂತೆ ಮಾಡುತ್ತೇನೆ.
ಯೇ ಯೇ ಕಾಮಾ ದುರ್ಲಭಾ ಮರ್ತ್ಯಲೋಕೇ  ಸರ್ವಾನ್ ಕಾಮಾಂಶ್ಛಂದತಃ ಪ್ರಾರ್ಥಯಸ್ವ
ಇಮಾ ರಾಮಾಃ ಸರಥಾಃ ಸತೂರ್ಯಾ ನ ಹೀದೃಶಾ ಲಂಭನೀಯಾ ಮನುಷ್ಯೈಃ
ಆಭಿರ್ಮತ್ಪ್ರತ್ತಾಭಿಃ ಪರಿಚಾರಯಸ್ವ  ನಚಿಕೇತೋ ಮರಣಂ ಮಾಽನುಪ್ರಾಕ್ಷೀಃ              ೨೫
ಮನುಷ್ಯ ಲೋಕದಲ್ಲಿ ನೀನು ಕಂಡು ಕೇಳರಿಯದ ದೇವಲೋಕದ ಅಪೂರ್ವ ಸಂಪತ್ತನು ಬಯಸು-ಅದನ್ನು ಕೊಡುತ್ತೇನೆ. ದೇವಲೋಕದ ಭೋಗವಾದ, ಮನುಷ್ಯ ಲೋಕದವರು ಎಂದೂ ಕಂಡು ಕೇಳರಿಯದ ಸೌಂದರ್ಯವಾದ  ಅಪ್ಸರ ಸ್ತ್ರೀರನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು, ಅವರು ನಿನ್ನ ಮನೆಯ ಚಾಕರಿ ಮಾಡಿಕೊಂಡಿರುವಂತೆ ಬಯಸು, ಎಲ್ಲಿ ಬೇಕಾದರೂ ಸಂಚರಿಸಬಲ್ಲ ದೇವಲೋಕದ ವಾಹನ ಬೇಕಿದ್ದರೆ ತೆಗೆದುಕೊಂಡು ಹೋಗು, ಭೂ ಲೋಕದಲ್ಲಿ ಇಲ್ಲದೇ ಇರುವ ವಿಶಿಷ್ಠ ತಾಳ ವಾದ್ಯಗಳನ್ನು ದೇವಲೋಕದಿಂದ ಪಡೆ. ಹೀಗೆ ಏನು ಬೇಕಾದರೂ ಕೇಳು. ಆದರೆ ಸಾವಿನ ಆಚೆಗೆ ಜೀವನನ್ನು ನಿಯಂತ್ರಿಸುವ ಭಗವಂತನ ಬಗ್ಗೆ  ಹೇಳು ಎಂದು ಕೇಳಬೇಡ. ಎಂದು ಯಮ ಒತ್ತಡದ ಪ್ರಲೋಭನೆ ಮಾಡುತ್ತಾನೆ. ಇದಕ್ಕೆ ನಚಿಕೇತ ಉತ್ತರಿಸುತ್ತ ಹೇಳುತ್ತಾನೆ:

ಶ್ವೋಭಾವಾ ಮರ್ತ್ಯಸ್ಯ ಯದಂತಕೈತತ್  ಸರ್ವೇಂದ್ರಿಯಾಣಾಂ ಜರಯಂತಿ ತೇಜಃ
ಅಪಿ ಸರ್ವಂ ಜೀವಿತಮಲ್ಪಮೇವ  ತವೈವ ವಾಹಾಸ್ತವ ನೃತ್ಯಗೀತೇ                            ೨೬

ನ ವಿತ್ತೇನ ತರ್ಪಣೀಯೋ ಮನುಷ್ಯೋ  ಲಪ್ಸ್ಯಾಮಹೇ ವಿತ್ತಮದ್ರಾಕ್ಷ್ಮ ಚೇತ್ತ್ವಾ
ಜೀವಿಷ್ಯಾಮೋ ಯಾವದೀಶಿಷ್ಯಸಿ ತ್ವಂ  ವರಸ್ತು ಮೇ ವರಣೀಯಃ ಸ ಏವ                    ೨೭

ಅಜೀರ್ಯತಾಮಮೃತಾನಾಮುಪೇತ್ಯ ಜೀರ್ಯನ್ ಮರ್ತ್ಯಃ ಕ್ವಥಸ್ಥಃ ಪ್ರಜಾನನ್
ಅಭಿಧ್ಯಾಯನ್ ವರ್ಣರತಿಪ್ರಮೋದಾನ್  ಅತಿದೀರ್ಘೇ ಜೀವಿತೇ ಕೋ ರಮೇತ             ೨೮

ಯಸ್ಮಿನ್ನಿದಂ ವಿಚಿಕಿತ್ಸಂತಿ ಮೃತ್ಯೋ ಯತ್ಸಾಂಪರಾಯೇ ಮಹತಿ ಬ್ರೂಹಿ ನಸ್ತತ್
ಯೋಽಯಂ ವರೋ ಗೂಢಮನುಪ್ರವಿಷ್ಟೋ ನಾನ್ಯಂ ತಸ್ಮಾನ್ನಚಿಕೇತಾ ವೃಣೀತೇ        ೨೯

ಇಲ್ಲಿ ನಚಿಕೇತ ಯಮನಿಗೆ ಕೊಟ್ಟ ಉತ್ತರ ಬಹಳ ರೋಚಕವಾದದ್ದು. ನಚಿಕೇತನ ಜ್ಞಾನ ಎಷ್ಟು ಎತ್ತರದ್ದು ಎನ್ನುವುದು ಈ ಶ್ಲೋಕಗಳಲ್ಲಿ ತಿಳಿಯುತ್ತದೆ. ನಚಿಕೇತ ಹೇಳುತ್ತಾನೆ- ನೀನು ಏನನ್ನು ಕೊಡುತ್ತೇನೆ ಎಂದು ಹೇಳಿದೆಯೋ ಅವೆಲ್ಲವೂ ನಶ್ವರ. ಈ ಪ್ರಪಂಚ ಶೋ-ಭಾವಃ ಮತ್ತು ಶೋ-ಅಭಾವಃ. ಇಂದು ಇದ್ದಂತೆ ನಾಳೆ ಇರತ್ತದೆ ಎನ್ನುವ ಭರವಸೆ ಇಲ್ಲ. ಇಂಥಹ ಪ್ರಪಂಚದಲ್ಲಿ ಬದುಕುವ ನಾವು ಮರ್ತ್ಯರು. ಇಲ್ಲಿ ಸಾವಿಲ್ಲದ್ದನ್ನು ನೀನು ಕೊಡಲಾರೆ. ಹೀಗಿರುವಾಗ ಈ ಲೌಕಿಕ ಪ್ರಪಂಚವನ್ನು ಬಯಸಿ ಪ್ರಯೋಜನವೇನು? ಇಲ್ಲಿ ನಾವು ಅನುಭವಿಸುವ ಎಲ್ಲಾ ಭೋಗವೂ ನಮ್ಮ ಇಂದ್ರಿಯಗಳ ತೇಜಸ್ಸನ್ನು ಹೀರಿ ನಮ್ಮನ್ನು ಮುಪ್ಪಿನತ್ತ ಕೊಂಡೊಯ್ಯುತ್ತದೆ. ಮುಪ್ಪಿನಿಂದ ಸಾವುನನ್ನ ಬಯಕೆಯನ್ನು ಇದ್ಯಾವುದೂ ತಣಿಸಲಾರದು. ಆದ್ದರಿಂದ ಇವೆಲ್ಲವೂ ನಿನ್ನಲ್ಲೇ ಇರಲಿ. ನನಗೆ ಬೇಡ.
ಮನುಷ್ಯನಿಗೆ ಎಷ್ಟು ಬೇಕೋ ಅಷ್ಟು ಹಣವನ್ನೂ ಕೊಡುತ್ತೇನೆ ಎಂದರೆ ಅದು ಮೂರ್ಖತನವಾಗುತ್ತದೆ. ಏಕೆಂದರೆ ಮನುಷ್ಯನ ಧನ ಆಸೆಯನ್ನೂ ಪೂರೈಸುವುದು ಯಾರಿಂದಲೂ ಸಾಧ್ಯವಿಲ್ಲ. ನಮಗೆಷ್ಟು ಸಿಕ್ಕಿದರೂ ಅದು ಸಾಕು ಎಂದೆನಿಸುವುದಿಲ್ಲ. ನನಗೆ ನಿನ್ನಂಥ ಜ್ಞಾನಿಯ ದರ್ಶನವಾಗಿರುವಾಗ ಬದುಕಿನ ಚಿಂತೆ ನನಗಿಲ್ಲ. ಅದಕ್ಕಾಗಿ ಈ ಯಾವ ಅಪೇಕ್ಷೆಯೂ ನನಗಿಲ್ಲ. ನನಗೆ ಬೇಕಾಗಿರುವುದು ಜ್ಞಾನ.
ಮುಪ್ಪು-ಸಾವನ್ನು ಗೆದ್ದ ನೀವು ಅಮೃತರು. ನಿಮ್ಮ ಬಳಿ ಬಂದ ನಾನು ಒಂದು ದಿನ ಮುದುಕನಾಗಿ ಸಾಯುವವ. ಹೀಗಾಗಿ ಸಾಯುವ ಮೊದಲು ನಿಮ್ಮಂಥವರಿಂದ ಜ್ಞಾನ ಪಡೆಯದಿದ್ದರೆ ನಾನೆಂಥ ತಿಳಿಗೇಡಿಯಾಗುತ್ತೇನೆ? ನನಗೊದಗಿದ ಇಂಥಹ ಅವಕಾಶದಲ್ಲಿ  ನಾನು ಜ್ಞಾನವನ್ನು ಪಡೆದುಕೊಳ್ಳದಿದ್ದರೆ ಅದು ದೊಡ್ಡ ನಷ್ಟ-ಎನ್ನುತ್ತಾನೆ ನಚಿಕೇತ. ಮಧ್ವಾಚಾರ್ಯರು ಹೇಳಿದಂತೆ “ನಿಜವಾಗಿ ಅಧ್ಯಾತ್ಮದ ರಹಸ್ಯವನ್ನು ಹೇಳಬಲ್ಲ ಜ್ಞಾನಿ ಸಿಕ್ಕಾಗ ಅವನನ್ನು ಉಪಯೋಗಿಸಿಕೊಳ್ಳದೇ ಇರುವವರು ಖಾಯಂ ಆಗಿ ನರಕ ವಾಸ ಮಾಡುತ್ತಾರೆ. ಅವರಿಗೆ ಉದ್ಧಾರದ ದಾರಿಯೇ ಇಲ್ಲ.” ಹೀಗಾಗಿ ಮುಂದುವರಿದು ನಚಿಕೇತ ಹೇಳುತ್ತಾನೆ: ನಿಮ್ಮಂತಹ ಜ್ಞಾನಿಯೊಂದಿಗೆ ಮಾತನಾಡುವ ಭಾಗ್ಯ ಸಿಕ್ಕಿದೆ, ಹಾಗಿರುವಾಗ ನನಗೆ ಸಾಧ್ಯವಾದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡದಿದ್ದರೆ ಎಂಥಾ ನಷ್ಟ. ಏನೂ ಜ್ಞಾನ ಸಾಧನೆ ಮಾಡದೆ ಕೇವಲ ತಿಂದುಂಡು ಜೀವನ ಕಳೆಯುವುದರಲ್ಲಿ ಯಾವ ಸುಖವಿದೆ? ಕೇವಲ ಬಂಧದ ಬದುಕು, ಭೋಗದ ಆಸಕ್ತಿಯಲ್ಲಿದ್ದು, ಅದರಾಚೆಗಿನ ಅರಿವೇ ಇಲ್ಲದೆ ಬದುಕುವುದರಿಂದ ಮನುಷ್ಯ ಜೀವನ ವ್ಯರ್ಥ. ಈ ರೀತಿ ಬದುಕಿದರೆ ಮನುಷ್ಯ ಜನ್ಮ ಪಡೆದೂ ಪ್ರಾಣಿಯಾಗಿ ಬದುಕಿದಂತೆ. ಹಾಗಾಗಿ ಕೇವಲ ತಿಂದುಂಡು ಬದುಕುವ ಧೀರ್ಘ ಜೀವನ ನನಗೆ ಬೇಡ-ಎನ್ನುತ್ತಾನೆ ನಚಿಕೇತ. ಇಲ್ಲಿ ‘ಜೀರ್ಯನ್ ಮರ್ತ್ಯಃ ಕ್ವಥಸ್ಥಃ ಪ್ರಜಾನನ್’ ಎನ್ನುವಲ್ಲಿ ಕ್ವಥಸ್ಥಃ ಎನ್ನುವ ವಿಶೇಷ ಪದ ಬಳಕೆಯಾಗಿದೆ. ಇದು ಸತ್ತು ನರಕಕ್ಕೆ ಹೋದ ಮನುಷ್ಯನ ಪಾಡನ್ನು ಹೇಳುವ ಪದ. ಕ್ವಥನ ಶೀಲೇ ನರಕೇ ಸ್ಥಿತಃ. ಕ್ವದ ಅಂದರೆ ದುಃಖದ ಮಡುವಿನಲ್ಲಿ ಬಿದ್ದು ಬೇಯುವುದು[ಥ-ಕಾರದ ಬದಲು ಮೂರನೇ ಪದವಾದ ದ-ಕಾರ ಬಳಸುತ್ತಾರೆ]-ತುಂಬಾ ಕಷ್ಟವನ್ನು ಅನುಭವಿಸುವ ನರಕಲೋಕ.  
ಮುಂದುವರಿದು ನಚಿಕೇತ ಹೇಳುತ್ತಾನೆ: ಮರಳಿ ಬಾರದ ಮುಕ್ತಿಯಲ್ಲಿ ಭಗವಂತ ಹೇಗೆ ನಿಯಮಿಸುತ್ತಾನೆ ಎಂದು ಪೂರ್ತಿ ತಿಳಿಯದೆ, ಅದನ್ನು ತಿಳಿಯುವುದಕ್ಕೊಸ್ಕರ ದೇವತೆಗಳು ಏನು ಚರ್ಚೆ ಮಾಡುತ್ತಾರೆ, ಅಂಥಹ ಭಗವಂತನ ಜ್ಞಾನವನ್ನು ನನಗೆ ಕೊಡು. ಭೂಮಿಯಲ್ಲಿ ಸಿಗದ ಈ ಅಪೂರ್ವ ತತ್ವಜ್ಞಾನ ನನಗೆ ಬೇಕು. ಈ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಇನ್ಯಾವುದೂ ಇಲ್ಲ. ನಮ್ಮ ಹೃದಯಗುಹೆಯಲ್ಲೇ ಇದ್ದರೂ, ನಮ್ಮ ಪ್ರಜ್ಞೆಗೆ ನಿಲುಕದ ತತ್ವಜ್ಞಾನ  ನನಗೆ ಬೇಕು. ಯಾರಿಗೂ ತಿಳಿಯದ ಈ ಗುಟ್ಟನ್ನು ಇಂದು ನಿನ್ನಿಂದ ಪಡೆಯುವ ಭಾಗ್ಯ ನನಗೆ ಬಂದಿದೆ. ಆ ಅಧ್ಯಾತ್ಮದ ರಹಸ್ಯವಾದ ಮುಕ್ತನಿಯಾಮಕ ಭಗವಂತನ ಮಹಿಮೆಯನ್ನು ಹೇಳು. ಇದನ್ನು ಬಿಟ್ಟು ನಚಿಕೇತ ಇನ್ನೇನನ್ನೂ ಬಯಸುವುದಿಲ್ಲ. ಎಂದು ನಚಿಕೇತ ಗಟ್ಟಿಯಾಗಿ ಕುಳಿತುಬಿಟ್ಟ.
ಪ್ರೀತಿಯ ಅಧ್ಯಾತ್ಮ ಬಂಧುಗಳೆ, ಒಂದು ಸುಂದರ ಕಥೆಯ ರೂಪದಲ್ಲಿ ಜ್ಞಾನಧಾರೆಯನ್ನು  ಹರಿಸುವ ಈ ಉಪನಿಷತ್ತಿನ ಮೊದಲ ಅಧ್ಯಾಯದ ಮೊದಲ ಬಳ್ಳಿಯನ್ನು ಇಲ್ಲಿ ನಾವು  ನಮ್ಮ ಸಾಮರ್ಥ್ಯಕ್ಕನುಗುಣವಾಗಿ ನೋಡಿದೆವು. ಇಲ್ಲಿ ಬರುವ ಒಂದೊಂದು ಶ್ಲೋಕದಲ್ಲಿನ ಒಂದೊಂದು ಪದದಲ್ಲೂ ಅನೇಕ ಗುಹ್ಯಾರ್ಥಗಳು ಅಡಗಿವೆ. ಕಥಾ ರೂಪದಲ್ಲಿ ಹರಿಯುವಾಗ ಕಥೆಯ ಪಾತ್ರಧಾರಿಗಳ ನಡವಳಿಕೆಯಲ್ಲಿ ಕೂಡಾ ನಾವು ತಿಳಿಯುವುದು ಬಹಳಷ್ಟಿದೆ. ಮೇಲ್ನೋಟದಲ್ಲಿ ನೋಡಿದರೆ ಒಬ್ಬ ಮಹಾನ್ ಜ್ಞಾನಿಯಾದ ಉದ್ಧಾಲಕ ಕೋಪವನ್ನು, ಲೋಭವನ್ನು ಗೆದ್ದಿರಲಿಲ್ಲ ಎಂದು ಕಾಣಿಸಿದರೂ, ನಂತರ ಆತನ ಕೋಪ ಇಂಥಹ ಮಹಾನ್ ಜ್ಞಾನ ಭೂಮಿಗಿಳಿದು ಬರುವಂತೆ ಮಾಡಲು ಭಗವಂತ ಮಾಡಿದ ವ್ಯವಸ್ಥೆ ಇದಾಗಿತ್ತು ಎನ್ನುವುದು ತಿಳಿಯುತ್ತದೆ. ಇನ್ನು ಯಮ ಧರ್ಮರಾಯ. ಈತನ ಪಾತ್ರದ ಮುಖೇನ ಭಗವಂತ  ನಮಗೆ ಅದೆಷ್ಟು ಸಂದೇಶವನ್ನು ಕರುಣಿಸಿದ್ದಾನೆ? ಅತಿಥಿ ಸತ್ಕಾರ ಹೇಗಿರಬೇಕು, ಜ್ಞಾನಿಯನ್ನು ಹೇಗೆ ಗೌರವಿಸಬೇಕು, ಮಹತ್ತಾದ ಜ್ಞಾನವನ್ನು ಕೊಡುವಾಗ ವ್ಯಕ್ತಿಯ ಯೋಗ್ಯತೆಯನ್ನು ಹೇಗೆ ಪರೀಕ್ಷಿಸಬೇಕು ಇತ್ಯಾದಿ. ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. “ಎಲ್ಲವನ್ನೂ ತಿಳಿದ ಯಮಧರ್ಮನಿಗೆ ನಚಿಕೇತನ ಯೋಗ್ಯತೆ ತಿಳಿದಿರಲಿಲ್ಲವೇ? ಗೊತ್ತಿದ್ದಿದ್ದರೆ ಮತ್ತೆ ಆತನನ್ನು ಲೌಕಿಕವಾಗ ಪ್ರಲೋಭನೆ ಮಾಡುವ ಅಗತ್ಯವೇನಿತ್ತು?” ಎಂದು.  ನಿಜ, ಯಮನಿಗೆ ಎಲ್ಲವೂ ತಿಳಿದಿತ್ತು. ಆದರೂ ಕೂಡ ಆತ ನಚಿಕೇತನನ್ನು ಪರೀಕ್ಷಿಸಿದ. ಇದಕ್ಕೆ ಕಾರಣವೇನೆಂದರೆ- ಮಹಾತ್ಮರಾದವರು ಯಾವಾಗಲೂ ಲೋಕನಿಯಮದಂತೆಯೇ ನೆಡೆದುಕೊಳ್ಳುತ್ತಾರೆ. ಏಕೆಂದರೆ ಮಹಾತ್ಮರ ನಡೆಯನ್ನು ಪ್ರಪಂಚ ಸದಾ ಪ್ರಮಾಣವಾಗಿರಿಸಿಕೊಂಡು ಅನುಸರಿಸುತ್ತದೆ. ಹಾಗಿರುವಾಗ ಮಹಾತ್ಮರ ನಡೆ ಭಿನ್ನವಾಗಿದ್ದರೆ ಇಡೀ ಲೋಕ ಕರ್ಮ ಪ್ರಜ್ಞೆಯನ್ನು ಕಳೆದುಕೊಂಡು ದಾರಿತಪ್ಪಿಬಿಡುತ್ತದೆ, ಸ್ವಚ್ಛಂದತೆ ಬಂದು ನಿರ್ಧಿಷ್ಟ ವ್ಯವಸ್ಥೆ ಹೊರಟು ಹೋಗುತ್ತದೆ. [ಶ್ರೀಕೃಷ್ಣ  ಸಂಧ್ಯಾವಂದನೆ ಇತ್ಯಾದಿ ಮೂಲ ಕರ್ಮವನ್ನು ತಪ್ಪದೆ ಮಾಡುತ್ತಿದ್ದುದನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು. ಇದು ಆತನಿಗೊಸ್ಕರವಲ್ಲ, ಆತನನ್ನು ಹಿಂಬಾಲಿಸುವ ಜನರಿಗೆ ಮಾರ್ಗದರ್ಶನಕ್ಕೋಸ್ಕರ].   ಹೀಗಾಗಿ ದೇವತೆಗಳು ತಮ್ಮ ಕರ್ಮವನ್ನು ಲೋಕನಿಯಮದಂತೆ ಮಾಡಿ ತೋರಿಸುತ್ತಾರೆ. ಇದು ಅವರ ಶಿಕ್ಷಣ ಕ್ರಮ. ಇಲ್ಲಿ ಯಮ ನಚಿಕೇತನನ್ನು ಪರೀಕ್ಷಿಸುವ ಮುಖೇನ ಆತನ ಯೋಗ್ಯತೆಯನ್ನು  ನಮ್ಮ ಮುಂದೆ ತೆರೆದಿಟ್ಟಿದ್ದಾನೆ. ಇನ್ನು ಈ ಕಥೆಯ ನಾಯಕನಾದ ನಚಿಕೇತ. ಈತ ಜ್ಞಾನ ಸಂಪತ್ತಿನ ಮುಂದೆ ಇತರ ಲೌಕಿಕ ಸಂಪತ್ತು ನಶ್ವರ ಎನ್ನುವುದನ್ನು ಲೋಕಕ್ಕೆ  ತೋರಿಸಿಕೊಟ್ಟ. ಯಮ ಮೂರು ವರವನ್ನು ಕೊಡುತ್ತೇನೆ ಎಂದಾಗ ನಚಿಕೇತ ಧನ-ಕನಕವನ್ನು ಬೇಡದೆ, ಯಾವುದೇ ಪ್ರಲೋಭನೆಗೊಳಗಾಗದೆ ಗಟ್ಟಿಯಾಗಿ ನಿಂತು-ಲೋಕೊದ್ಧಾರಕ್ಕಾಗಿ ಗುರುವಿನಿಂದ ಜ್ಞಾನವನ್ನು ಬೇಡಿದ.  ಹೀಗೆ ಉಪನಿಷತ್ತಿನ ಪ್ರತಿಯೊಂದು ನಡೆಯ ಹಿಂದೆ ಕೂಡ ಅಪೂರ್ವವಾದ ಸಂದೇಶವಡಗಿರುವುದನ್ನು ನಾವು ಗಮನಿಸಬೇಕು. ಬನ್ನಿ ನಚಿಕೇತನ ಮೂರನೇ ಪ್ರಶ್ನೆಗೆ ಉತ್ತರವಾಗಿ ಬಂದಿರುವ ಉಪದೇಶವನ್ನು ಧರ್ಮರಾಯನಿಂದಲೇ ನೇರವಾಗಿ ಆಲಿಸೋಣ.        

ಇತಿ ಕಾಠಕೋಪನಿಷದಿ ಪ್ರಥಮಾಧ್ಯಾಯೇ ಪ್ರಥಮಾ ವಲ್ಲೀ ॥
ಇಲ್ಲಿಗೆ ಕಾಠಕೋಪನಿಷತ್ತಿನ ಮೊದಲ ಅಧ್ಯಾಯದ ಮೊದಲ ಬಳ್ಳಿ(ವಲ್ಲೀ) ಮುಗಿಯಿತು.
           *******      

Saturday, April 14, 2012

Kathopanishad in Kannada Ch-01 Canto-01 Shloka-14-19

             ಪ್ರ ತೇ ಬ್ರವೀಮಿ ತದು ಮೇ ನಿಬೋಧಃ  ಸ್ವರ್ಗ್ಯಮಗ್ನಿಂ ನಚಿಕೇತಃ ಪ್ರಜಾನನ್
             ಅನಂತಲೋಕಾಪ್ತಿಮಥೋ ಪ್ರತಿಷ್ಠಾಂ  ವಿದ್ಧಿ ತ್ವಮೇತಂ ನಿಹಿತಂ ಗುಹಾಯಾಮ್         ೧೪
ನಚಿಕೇತನ ಪ್ರಶ್ನೆಗೆ ಉತ್ತರಿಸುತ್ತಾ ಯಮ ಹೇಳುತ್ತಾನೆ: “ಎಲ್ಲಾ ವಿವರವನ್ನು, ಎಲ್ಲಾ ರಹಸ್ಯವನ್ನು ಬಿಡಿಸಿ ಹೇಳುತ್ತೇನೆ-ಅದನ್ನು ನನ್ನಿಂದ ಕೇಳು” ಎಂದು. ನಮಗೆ ತಿಳಿದಂತೆ ನಾವು ಮಾಡುವ ಕರ್ಮದ ಪಾಪ-ಪುಣ್ಯವನ್ನು ಲೆಕ್ಕ ಹಾಕಿ ಅದಕ್ಕನುಗುಣವಾದ ಫಲವನ್ನು ನಿರ್ಧರಿಸುವವ ಯಮ. ಹಾಗಾಗಿ ಕರ್ಮ ಮಾಡುವುದು ಹೇಗೆ,  ಅದರ ಹಿಂದಿನ ಅನುಸಂಧಾನ ಹೇಗಿರಬೇಕು, ನಾವು ಮಾಡುವ ಕರ್ಮ ಮೋಕ್ಷಪ್ರದವಾಗಬೇಕಾದರೆ ಏನು ಮಾಡಬೇಕು-ಇದನ್ನು ನಿಖರವಾಗಿ ಹೇಳಬಲ್ಲವ ಯಮ. ಆದ್ದರಿಂದ  “ಅದನ್ನು ನನ್ನಿಂದ ನೇರವಾಗಿ ಕೇಳು” ಎಂದಿದ್ದಾನೆ ಯಮ.
ಈ ಶ್ಲೋಕದಲ್ಲಿ ನಚಿಕೇತ ಮತ್ತು ಯಮ ಇಬ್ಬರಿಗೂ ಅನ್ವಯವಾಗುವ ‘ಪ್ರಜಾನನ್’  ಎನ್ನುವ ವಿಶೇಷಣ ಬಳಕೆಯಾಗಿದೆ. “ತಿಳುವಳಿಕೆ ಇಲ್ಲದ ಅಪ್ರಬುದ್ಧ-ನೀನಲ್ಲ, ಈ ‘ಸ್ವರ್ಗ್ಯಗ್ನಿ’ ಬಗ್ಗೆ ತಿಳಿದು ಅನುಷ್ಠಾನ ಮಾಡುವ ಯೋಗ್ಯತೆ ಇರುವವ(ಪ್ರಜಾನನ್) ನೀನು. ಆದರೂ ವಿಶೇಷ ತಿಳುವಳಿಕೆಗಾಗಿ ನನ್ನ ಬಳಿ ಕೇಳುತ್ತಿದ್ದೀಯ. ನನಗೆ ಈ ವಿದ್ಯೆ ಚನ್ನಾಗಿ ತಿಳಿದಿದೆ(ಪ್ರಜಾನನ್ ). ಅಂಥಹ ಮೊಕ್ಷಪ್ರದ ಅಗ್ನಿವಿದ್ಯೆಯನ್ನು ನಾನು ನಿನಗೆ ಹೇಳುತ್ತೇನೆ”. ಎನ್ನುವ ಧ್ವನಿ ಈ ವಿಶೇಷಣದ ಹಿಂದಿದೆ.
ಮುಂದುವರಿದು ಯಮ ಹೇಳುತ್ತಾನೆ: “ಈ ಅಗ್ನಿ ವಿದ್ಯೆಯನ್ನು ಯಾರು ತಿಳಿಯುತ್ತಾರೆ ಅವರಿಗೆ ಬರಿಯ ಸ್ವರ್ಗ ಪ್ರಾಪ್ತಿ ಮಾತ್ರವಲ್ಲ, ಅನಂತ ಲೋಕ ಪ್ರಾಪ್ತಿಯಾಗುತ್ತದೆ. ಆತ ಸಾವಿಲ್ಲದ ಮೋಕ್ಷವನ್ನು ಸೇರುತ್ತಾನೆ” ಎಂದು. ನಿತ್ಯಲೋಕದ ಪ್ರಾಪ್ತಿಗೆ ಕಾರಣವಾಗುವ ಈ ವಿದ್ಯೆಯ ಪ್ರತಿಪಾಧ್ಯ ಭಗವಂತನನ್ನು ಇಲ್ಲಿ  ‘ಅನಂತಲೋಕಾಪ್ತಿ’ ಎಂದು ಸಂಬೋಧಿಸಿದ್ದಾರೆ. ಭಗವಂತ ಅನಂತ ಲೋಕವನ್ನು ಕೊಡುವವನು ಮತ್ತು ಆತ ಎಲ್ಲಾ ಲೋಕಗಳ ಮೂಲಾಧಾರ(ಪ್ರತಿಷ್ಠ). ಸಾಂತವಾದ ಲೋಕವಿರಲಿ, ಅನಂತವಾದ ಲೋಕವಿರಲಿ, ಆ ಲೋಕಕ್ಕೋಸ್ಕರ ಸಾಧನೆ ಮಾಡುವ ಜೀವಜಾತವಿರಲಿ; ಎಲ್ಲವುದರ ಮೂಲಾಧಾರನಾದ, ಅಗ್ನಿಯಲ್ಲಿರತಕ್ಕಂತಹ ಭಗವಂತನ ವಿದ್ಯೆಯನ್ನು ತಿಳಿದು, ಅಗ್ನಿಯಲ್ಲಿ ಆತನ ಉಪಾಸನೆ ಮಾಡಿದರೆ ಅನಂತಲೋಕದ ಆಪ್ತಿಯಾಗುತ್ತದೆ ಮತ್ತು ನಿತ್ಯಲೋಕ ಶಾಶ್ವತವಾಗಿ ಪ್ರಾಪ್ತಿಯಾಗುತ್ತದೆ.
ಭಗವಂತನ ಪ್ರತೀಕದಲ್ಲಿ ಅತ್ಯಂತ ಶ್ರೇಷ್ಠವಾದ ಈ ಅಗ್ನಿ ಎಲ್ಲಿದೆ ಎಂದರೆ- ಇಲ್ಲಿ ಯಮ ಹೇಳುತ್ತಾನೆ: “ವಿದ್ಧಿ ತ್ವಮೇತಂ ನಿಹಿತಂ ಗುಹಾಯಾಮ್” ಎಂದು. ಭಗವಂತ ನಮ್ಮ ಹೃದಯ ಗುಹೆಯಲ್ಲೇ ಇದ್ದಾನೆ. ಕೃಷ್ಣ ಗೀತೆಯಲ್ಲಿ ಇದನ್ನೇ ಹೀಗೆ ಹೇಳಿದ್ದಾನೆ: “ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ” ಎಂದು.  ನಮ್ಮ ದೇಹದಲ್ಲಿ ಅಗ್ನಿ ಅಂತರ್ಗತನಾದ ವೈಶ್ವಾನರ ನಾಮಕ ಭಗವಂತನಿದ್ದಾನೆ. ನಮ್ಮೊಳಗಿದ್ದು ನಮಗೆ ಬದುಕುಕೊಟ್ಟು ರಕ್ಷಣೆ ಮಾಡುವ ಭಗವಂತ ನಮ್ಮ ಹೃದಯದಲ್ಲಿ ಮಾತ್ರವಲ್ಲ ನಮ್ಮ ಸ್ವರೂಪದ ಹೃದಯದಲ್ಲೂ ಇದ್ದಾನೆ. ಈ ಕಾರಣದಿಂದ ಶಾಸ್ತ್ರಕಾರರು ಭಗವಂತನ ಎರಡು ರೂಪಗಳನ್ನು ಈ ರೀತಿ ವರ್ಣಿಸಿದ್ದಾರೆ: “ಆತ್ಮಾಂತರಾತ್ಮೇತಿ ಹರಿಃ ಏಕ ಏವ ದ್ವಿದಾಸ್ಥಿತಃ” ಎಂದು. ದೇಹದ ಹೃದಯದಲ್ಲಿ ‘ಆತ್ಮ’ ನಾಮಕನಾಗಿ, ದೇಹದ ಹೃದಯದಲ್ಲಿರುವ ಜೀವದ ಹೃದಯದಲ್ಲಿ ‘ಅಂತರಾತ್ಮ’ ನಾಮಕನಾಗಿ ಭಗವಂತನಿದ್ದಾನೆ. ಈ ಕಾರಣದಿಂದ “ಭಗವಂತನನ್ನು ಬೇರೆಲ್ಲೂ ಹುಡುಕುವುದು ಬೇಡ, ಆತ ನಿಮ್ಮ ಹೃದಯ ಗುಹೆಯಲ್ಲೇ ಇದ್ದಾನೆ” ಎಂದಿದ್ದಾನೆ ಯಮ.  ಹೀಗಾಗಿ ಭಗವಂತನನ್ನು ಅಗ್ನಿಯಲ್ಲಿ ಉಪಾಸನೆ ಮಾಡುವಾಗ ಎಲ್ಲೋ ಹೊರಗಿನಿಂದ ಉಪಾಸನೆ ಮಾಡಬಾರದು. “ಮದ್ ಹೃದಯಸ್ಥಿತಂ, ವೈಶ್ವಾನರ ನಾಮಂ, ಅಗ್ನಿಯಂತರ್ಗತಂ, ಪರಶುರಾಮಂ, ಕುಂಡ ಮಧ್ಯೇ-ಆವಾಹಯಾಮಿ” ಎಂದು -ಹೃದಯದಲ್ಲಿರುವ ಭಗವಂತನನ್ನು ಕುಂಡದಲ್ಲಿ ಆವಾಹನೆ ಮಾಡಿ ಆರಾಧನೆ ಮಾಡಬೇಕು. ಅದೇ ರೀತಿ ಪ್ರತಿಮೆಯಲ್ಲೂ ಕೂಡ- “ಹೃತ್ಕಮಲಸ್ಥಿತಂ ನಾರಾಯಣಂ ಪ್ರತಿಮಾಯಾಂ ಆವಾಹಯಾಮಿ” ಎಂದು ಆವಾಹನೆ ಮಾಡಿ ಆರಾಧನೆ ಮಾಡಬೇಕು.
ಇಲ್ಲಿ ನಚಿಕೇತನಿಗೆ ಎಲ್ಲಾ ವಿವರವನ್ನೂ ಹೇಳುವುದಾಗಿ ಪ್ರತಿಜ್ಞೆ ಮಾಡಿದ್ದ ಯಮ ಮುಂದೇನು ಹೇಳಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
             ಲೋಕಾದಿಮಗ್ನಿಂ ತಮುವಾಚ ತಸ್ಮೈ  ಯಾ ಇಷ್ಟಕಾ ಯಾವತೀರ್ವಾ ಯಥಾ ವಾ
              ಸ ಚಾಪಿ ತತ್ಪ್ರತ್ಯವದದ್ಯಥೋಕ್ತಂ  ಅಥಾಸ್ಯ ಮೃತ್ಯುಃ ಪುನರೇವಾಹ ತುಷ್ಟಃ                  ೧೫

             ತಮಬ್ರವೀತ್ ಪ್ರೀಯಮಾಣೋ ಮಹಾತ್ಮಾ  ವರಂ ತವೇಹಾದ್ಯ ದದಾಮಿ ಭೂಯಃ
             ತವೈವ ನಾಮ್ನಾ ಭವಿತಾSಯಮಗ್ನಿಃ ಸೃಂಕಾಂ ಚೇಮಾಮನೇಕರೂಪಾಂ ಗೃಹಾಣ        ೧೬

             ತ್ರಿಣಾಚಿಕೇತಸ್ತ್ರಿಭಿರೇತ್ಯ ಸಂಧಿಂ ತ್ರಿಕರ್ಮಕೃತ್ತರತಿ ಜನ್ಮಮೃತ್ಯೂ
             ಬ್ರಹ್ಮಜಜ್ಞಂ ದೇವಮೀಡ್ಯಂ ವಿದಿತ್ವಾ ನಿಚಾಯ್ಯೇಮಾಂ ಶಾಂತಿಮತ್ಯಂತಮೇತಿ              ೧೭

            ತ್ರಿಣಾಚಿಕೇತಸ್ತ್ರಯಮೇತದ್ವಿದಿತ್ವಾ  ಯ ಏವಂ ವಿದ್ವಾಂಶ್ಚಿನುತೇ ನಾಚಿಕೇತಂ
            ಸ ಮೃತ್ಯುಪಾಶಾನ್ ಪುರತಃ ಪ್ರಣೋದ್ಯ  ಶೋಕಾತಿಗೋ ಮೋದತೇ ಸ್ವರ್ಗಲೋಕೇ      ೧೮

           ಏಷ ತೇSಗ್ನಿರ್ನಚಿಕೇತಃ ಸ್ವರ್ಗ್ಯೋ  ಯಮವೃಣೀಥಾ ದ್ವಿತೀಯೇನ ವರೇಣ
           ಏತಮಗ್ನಿಂ ತವೈವ ಪ್ರವಕ್ಷ್ಯಂತಿ ಜನಾಸಃ   ತೃತೀಯಂ ವರಂ ನಚಿಕೇತೋ ವೃಣೀಷ್ವ        ೧೯

[ಉಪನಿಷತ್ತಿನಲ್ಲಿರುವ ಈ ಮಂತ್ರಗಳು ಅರ್ಥ ಅನ್ವಯ ಪ್ರಕಾರ ಸ್ವಲ್ಪ ಹಿಂದೆ ಮುಂದೆ ಇರುವುದರಿಂದ, ಮುಂದೆ ಈ ಶ್ಲೋಕಗಳ ಅರ್ಥವಿವರಣೆ ಮಾಡುವಾಗ, ಹೆಚ್ಚು ಸ್ಪಷ್ಟತೆಗಾಗಿ, ಶ್ಲೋಕಗಳ ಅನುಕ್ರಮವನ್ನು ಬದಲಿಸಿ ವಿವರಿಸಿರುವುದನ್ನು ಓದುಗರು ಗಮನಿಸಬೇಕು]  

“ಲೋಕಾದಿಮಗ್ನಿಂ ತಮುವಾಚ ತಸ್ಮೈ  ಯಾ ಇಷ್ಟಕಾ ಯಾವತೀರ್ವಾ ಯಥಾ ವಾ(ಶ್ಲೋ-೧೫_೧). ಇಲ್ಲಿ “ಎಲ್ಲಾ ಲೋಕಗಳಿಗೆ ಕಾರಣಕರ್ತ, ಎಲ್ಲಾ ಲೋಕಗಳ ಆದಿ, ಎಲ್ಲಾ ಜೀವಜಾತಕ್ಕೂ ಕಾರಣನಾದ ಅಗ್ನಿನಾರಾಯಣನನ್ನು ನಚಿಕೇತನಿಗೆ ಯಮ ಉಪದೇಶಿಸಿದ” ಎಂದಿದ್ದಾರೆ. ಆದರೆ ಇಲ್ಲಿ ಏನು ಉಪದೇಶಿಸಿದ ಎಂದು ಬಿಡಿಸಿ ಎಲ್ಲಿಯೂ ಹೇಳಿಲ್ಲ. ಅದು ರಹಸ್ಯ. ಅದನ್ನು ನಾವು ಗುರುಮುಖದಲ್ಲಿ ತಿಳಿದುಕೊಳ್ಳಬೇಕು. ಇಲ್ಲಿ “ಯಾ ಇಷ್ಟಕಾ ಯಾವತೀರ್ವಾ ಯಥಾ ವಾ” ಎಂದಿದ್ದಾರೆ. ಅಗ್ನಿಯನ್ನು ಹೊರಗಿನ ಕುಂಡದಲ್ಲಿ ಉಪಾಸನೆ ಮಾಡಬೇಕಿದ್ದರೆ ಅಲ್ಲಿ ಎಷ್ಟು ಇಟ್ಟಿಗೆಗಳನ್ನು(ಇಷ್ಟಕಾ) ಬಳಸಬೇಕು, ಆ ಇಟ್ಟಿಗೆಗಳಲ್ಲಿ ಏನು ಅನುಸಂಧಾನವಿರಬೇಕು, ಇಟ್ಟಿಗೆಗಳನ್ನು ಹೇಗೆ ಜೋಡಿಸಬೇಕು, ಇತ್ಯಾದಿಯನ್ನು ಯಮ ನಚಿಕೇತನಿಗೆ ವಿವರಿಸಿದ. ಇಲ್ಲಿ ಈ ಕುರಿತು ನೇರವಾಗಿ ವಿವರವನ್ನು ಹೇಳಿಲ್ಲವಾದ್ದರಿಂದ ನಾವು ಇದರ ಹಿಂದಿರುವ ಗಣಿತವನ್ನು ಸ್ವಲ್ಪ ವಿಶ್ಲೇಷಿಸಬೇಕಾಗುತ್ತದೆ.
ಅಗ್ನಿಕುಂಡದ ಮಧ್ಯದಲ್ಲಿರುವ ಅಗ್ನಿಯಲ್ಲಿ ಮಾತ್ರ ನಾರಾಯಣನಿರುವುದಲ್ಲ, ಆ ಕುಂಡವನ್ನು ರಚನೆ ಮಾಡಲು ಇಟ್ಟ ಇಟ್ಟಿಗೆಯಲ್ಲೂ  ಭಗವಂತನ ರೂಪ ಅಡಗಿದೆ. ಇಲ್ಲಿ ಅಗ್ನಿಕುಂಡ ಎನ್ನುವುದು ನಮ್ಮ ಪಿಂಡಾಂಡದ ದ್ಯೋತಕ. ನಮಗೆ ತಿಳಿದಂತೆ ನಮ್ಮ ಹೃದಯದಲ್ಲಿ ಮಾತ್ರ ಭಗವಂತನಿರುವುದಲ್ಲ, ನಮ್ಮ ಇಡೀ ದೇಹದಲ್ಲಿ ವಿವಿಧ ರೂಪದಲ್ಲಿ ಭಗವಂತನಿದ್ದಾನೆ. ಆದ್ದರಿಂದ ಅಗ್ನಿಹೋತ್ರ ಮಾಡುವಾಗ ಅಗ್ನಿಕುಂಡದ ಒಂದೊಂದು ಇಟ್ಟಿಗೆಯಲ್ಲೂ ಭಗವಂತನಿದ್ದಾನೆ ಎನ್ನುವ ಅನುಸಂಧಾನ ಬಹಳ ಮುಖ್ಯ. ಮೇಲಿನ ಶ್ಲೋಕದಲ್ಲಿ ಬಳಸಲಾದ ‘ಇಷ್ಟಕಾ’ ಎನ್ನುವ ಪದ ಬಹಳ ರೋಚಕವಾದ ಪದ. ಮೇಲ್ನೋಟಕ್ಕೆ ಇಟ್ಟಿಗೆ ಎನ್ನುವ ಅರ್ಥ ಕೊಡುವ ಈ ಪದಕ್ಕೆ ವಿಶೇಷ ಅರ್ಥವಿದೆ. ನಮಗೆ ಅತ್ಯಂತ ಪ್ರಿಯವಾದ, ಆನಂದಮಯವಾದ ವಸ್ತು-ಇಷ್ಟಕಾ. ಆದ್ದರಿಂದ ಇಲ್ಲಿ ‘ಇಷ್ಟಕಾ’ ಎನ್ನುವ ಪದ ಬರಿಯ ಇಟ್ಟಿಗೆಯನ್ನು ಹೇಳುವುದಲ್ಲ, ಆ ಇಟ್ಟಿಗೆಯೊಳಗಿನ ಆನಂದಸ್ವರೂಪ  ಭಗವಂತನನ್ನು ಹೇಳುತ್ತದೆ.
ಇನ್ನು ‘ಯಾವತೀಃ’ ಅಂದರೆ ಎಷ್ಟು ಇಟ್ಟಿಗೆಯಿಂದ ಕುಂಡ ಮಾಡಬೇಕು ಮತ್ತು ಯಾವ ರೀತಿ(ಯಥಾ ವಾ) ಉಪಾಸನೆ ಮಾಡಬೇಕು ಎನ್ನುವ ಪ್ರಶ್ನೆ. ಶಾಸ್ತ್ರೀಯವಾಗಿ ಅಗ್ನಿಕುಂಡವನ್ನು ೩೬೦ ಇಟ್ಟಿಗೆಗಳಿಂದ ಮಾಡಬೇಕು. ೩೬೦ ಅನ್ನುವುದು ಒಂದು ವಿಶಿಷ್ಠವಾದ ಸಂಖ್ಯೆ. ಇದರ ಹಿಂದೆ ಮೂರು ವಿಧದ ಉಪಾಸನೆ ಇದೆ. ಅವುಗಳೆಂದರೆ: ಭಗವಂತನನ್ನು ಶರೀರದಲ್ಲಿ ಉಪಾಸನೆ, ಅಗ್ನಿಕುಂಡದಲ್ಲಿ ಉಪಾಸನೆ ಮತ್ತು ಕಾಲದಲ್ಲಿ ಉಪಾಸನೆ. ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ ೩೬೦ ಅಸ್ಥಿಗಳಿವೆ, ಅಷ್ಟೇ  ಅಸ್ಥಿಮಜ್ಜೆ[marrows] ಮತ್ತು ಅಸ್ಥಿಸಂಧಿಗಳಿವೆ. [ಆಧುನಿಕ ವೈದ್ಯ ವಿಜ್ಞಾನ ಸುಮಾರು ೩೦೦ ಅಸ್ಥಿಗಳನ್ನು ಗುರುತಿಸುತ್ತದೆ. ಆದರೆ ಪ್ರಾಚೀನರು ಅಸ್ಥಿಸಂಧಿಗಳನ್ನೆಲ್ಲ ಪರಿಗಣಿಸಿ ೩೬೦ ಎನ್ನುತ್ತಾರೆ]. ಇದರಲ್ಲಿ ಭಗವಂತ ೩೬೦ ರೂಪದಲ್ಲಿ ನೆಲೆಸಿ ನಡೆಸುತ್ತಿದ್ದಾನೆ. ಇದನ್ನೇ ನಾವು ಹೊರಪ್ರಪಂಚದಲ್ಲಿ ಯಜ್ಞಕುಂಡದ ೩೬೦ ಇಟ್ಟಿಗೆಯಲ್ಲಿ ಕಾಣಬೇಕು.
ಇನ್ನು ಕಾಲದಲ್ಲಿ ಭಗವಂತನ ಉಪಾಸನೆ. ಬೇರೆಬೇರೆ ಮಾನದ ಪ್ರಕಾರ ವರ್ಷದಲ್ಲಿನ ದಿನಗಳ ಸಂಖ್ಯೆ ಬೇರೆಬೇರೆ. ಸೌರಮಾನದ ಪ್ರಕಾರ ವರ್ಷಕ್ಕೆ  ೩೬೫ ಮತ್ತು ೮/೩೧ ದಿನಗಳು; ಚಾಂದ್ರಮಾನದ ಪ್ರಕಾರ ೩೫೫ ದಿನಗಳು; ನಕ್ಷತ್ರಮಾನದ ಪ್ರಕಾರ ೩೨೪ ದಿನಗಳು; ಬೃಹಸ್ಪತಿಮಾನದ ಪ್ರಕಾರ ೩೯೦ ದಿನಗಳು. ಆದರೆ ಸಾರ್ವತ್ರಿಕವಾಗಿ ಒಂದು ವತ್ಸರ ಎಂದರೆ ೩೬೦ ದಿನಗಳು. ಏಕೆಂದರೆ ೩೬೦ ಡಿಗ್ರಿ(ಕೋನ) ಅಂದರೆ ಒಂದು ಪೂರ್ಣವೃತ್ತ. ಹೀಗೆ ಅಗ್ನಿಕುಂಡದ ೩೬೦ ಇಟ್ಟಿಗೆಗಳಲ್ಲಿ, ದೇಹದ ೩೬೦ ಅಸ್ಥಿಗಳಲ್ಲಿ, ವರ್ಷದ ೩೬೦ ದಿನಗಳಲ್ಲಿ- ೧೦೮೦[೩೬೦+೩೬೦+೩೬೦] ರೂಪಗಳಲ್ಲಿ ಭಗವಂತ ನೆಲೆಸಿದ್ದಾನೆ. ನಾವು ವಿಷ್ಣುಸಹಸ್ರನಾಮದಲ್ಲಿನ  ‘ಚ’, ‘ಏವ’ ಇತ್ಯಾದಿ ಏಕಾಕ್ಷರ ನಾಮಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ನೋಡಿದರೆ ಅಲ್ಲಿ ೧೦೮೦ ನಾಮಗಳನ್ನು ಕಾಣಬಹುದು. ಇದು ಭಗವಂತನ ಈ ೧೦೮೦ ರೂಪಗಳನ್ನು ಹೇಳುವ ವಿಶಿಷ್ಠನಾಮಗಳು. ಇದಕ್ಕಾಗಿ ವಿಷ್ಣುಸಹಸ್ರನಾಮ ಅಷ್ಟು ಶ್ರೇಷ್ಠ. ಅದನ್ನು ಉಚ್ಛರಿಸಿದಾಗ ಅದರ ಕಂಪನದಿಂದ ನಮ್ಮ ದೇಹದ ರೋಗ ನಾಶವಾಗಿ ಆರೋಗ್ಯ ಸುಧಾರಣೆಯಾಗುತ್ತದೆ ಮತ್ತು ಬದುಕಿನಲ್ಲಿ ಸಮಸ್ಯೆ ಇರುವುದಿಲ್ಲ.
ಹೀಗೆ ಇಲ್ಲಿ ಯಮ- 'ಅಗ್ನಿಯಂತರ್ಗತ ಭಗವಂತ-ಕಾಲದಲ್ಲಿ, ಕುಂಡದಲ್ಲಿ ಮತ್ತು ಪಿಂಡ(ದೇಹ)ದಲ್ಲಿ ನೆಲೆಸಿದ್ದಾನೆ ಎಂದು ತಿಳಿದು ಉಪಾಸನೆ ಮಾಡಬೇಕು' ಎನ್ನುವ ವಿಷಯವನ್ನು ನಚಿಕೇತನಿಗೆ ವಿವರಿಸಿದ. ಇದು ವಿಶ್ವದಲ್ಲಿರುವ ಭಗವಂತನನ್ನು ೩೬೦ ಎನ್ನುವ ಸಂಖ್ಯೆಯಲ್ಲಿ ಅಳವಡಿಸಿ ಮಾಡತಕ್ಕಂತಹ ಒಂದು ಅತ್ಯದ್ಭುತವಾದ   ಉಪಾಸನೆ.
ಯಮ ಹೇಳುತ್ತಾನೆ: “ತ್ರಿಣಾಚಿಕೇತಸ್ತ್ರಿಭಿರೇತ್ಯ ಸಂಧಿಂ ತ್ರಿಕರ್ಮಕೃತ್ತರತಿ ಜನ್ಮಮೃತ್ಯೂ (ಶ್ಲೋ:೧೭-೧)ಎಂದು. ಇಲ್ಲಿ ಪ್ರತಿಯೊಬ್ಬನೂ ತ್ರಿಣಾಚಿಕೇತನಾಗಬೇಕು ಎಂದಿದ್ದಾನೆ ಯಮ. ನಚಿಕೇತನ ಮುಖೇನ ಭೂಮಿಗೆ ಪರಿಚಯಿಸಲ್ಪಟ್ಟ ಅಗ್ನಿನಾರಾಯಣನನ್ನು ಮೂರು ಕಡೆ [ಅಗ್ನಿಕುಂಡದಲ್ಲಿ-ಅಗ್ನಿರೂಪ, ಹೃದಯಕುಂಡದಲ್ಲಿ- ವಾಯುರೂಪ, ಕಾಲಕುಂಡದಲ್ಲಿ- ಆದಿತ್ಯರೂಪ] ಉಪಾಸನೆ ಮಾಡುವವರು, ಮೂರರ ಜೊತೆಗೆ ಸಂಧಾನ (ತ್ರಿರೇತ್ಯ ಸಂಧಿಃ) ಮಾಡಿಕೊಂಡು, ಮೂರು ಕರ್ಮಗಳನ್ನು ಮಾಡಿದರೆ(ತ್ರಿಕರ್ಮಕೃತ್), ಆಗ ಜನ್ಮ-ಮೃತ್ಯುವನ್ನು ದಾಟುತ್ತಾರೆ-ಎನ್ನುವುದು ಯಮನ ವಿವರಣೆ. ಇಲ್ಲಿ ‘ತ್ರಿರೇತ್ಯ ಸಂಧಿಃ’ ಎನ್ನುವಲ್ಲಿ ‘ತ್ರಿ’ ಎಂದರೆ ಮೂರು ವೇದಗಳು.[ಗದ್ಯರೂಪ, ಪದ್ಯರೂಪ ಮತ್ತು ಗಾನರೂಪದ ಮೂರು ವೇದಗಳು]. ವೇದ ಶಾಖೆಗಳು/ಸಂಹಿತೆಗಳು[ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ-ಒಟ್ಟು-೪] ಮತ್ತು ವೇದದ ಉಪಶಾಖೆಗಳು[ಋಗ್ವೇದದಲ್ಲಿ-೨೪, ಯಜುರ್ವೇದದಲ್ಲಿ-೧೦೧, ಸಾಮವೇದದಲ್ಲಿ-೧೦೦೦, ಅಥರ್ವವೇದದಲ್ಲಿ-೧೨. ಒಟ್ಟು-೧೧೩೭] ಅನೇಕ. ಆದರೆ ಅವುಗಳಲ್ಲಿ ಒಂದಕ್ಕೊಂದು ವಿರೋಧವಿಲ್ಲ. ಪ್ರತಿಯೊಂದು ವೇದವೂ ಭಗವಂತನನ್ನು, ಆತನ ಮಹಿಮೆಯನ್ನು ಹೇಳುತ್ತದೆ. ಅದರಲ್ಲಿರುವ ವಿಷಯವನ್ನು ಒಂದಕ್ಕೊಂದು ಸಮನ್ವಯ ಮಾಡಿ ತಿಳಿದುಕೊಳ್ಳುವುದು ‘ತ್ರಿರೇತ್ಯ ಸಂಧಿಃ’. ಹೀಗೆ ವೇದದ ಮೂಲಾರ್ಥವನ್ನು ತಿಳಿದುಕೊಂಡು, ದಿನವೂ ಯಜ್ಞ, ದಾನ, ತಪಃ ಎನ್ನುವ   ಮೂರು ಕರ್ಮವನ್ನು ಮಾಡಿಕೊಂಡು ಅಗ್ನಿಕಾರ್ಯ ಮಾಡಿದರೆ ಭಗವಂತ ಒಲಿಯುತ್ತಾನೆ.
ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಅದೇನೆಂದರೆ-ಒಬ್ಬ ಸಾಮಾನ್ಯ ಮನುಷ್ಯನಿಗೆ ದಿನವೂ ಯಜ್ಞ, ದಾನ, ತಪಸ್ಸನ್ನು ಮಾಡಲು ಸಾಧ್ಯವೋ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಶ್ರೀಕೃಷ್ಣ ಗೀತೆಯಲ್ಲಿ ಬಹಳ ಸುಂದರವಾದ ವಿವರಣೆ ಕೊಟ್ಟಿದ್ದಾನೆ(ಅ-೧೭).  ನಾವು ಮಾಡುವ ಪ್ರತಿಯೊಂದು ಕೆಲಸವೂ ಒಂದು ದೇವರಪೂಜೆ, ಅದು ಭಗವಂತನಿಗೆ ಅರ್ಪಿತವಾಗಿ ಅವನು ಪ್ರೀತನಾಗಲಿ ಎಂದು ಮಾಡುವುದು ಯಜ್ಞ. ನಾನು ಆಡಿದ ಮಾತೆಲ್ಲವೂ ನಿನ್ನ ಸ್ತೋತ್ರವಾಗಲಿ, ನಾನು ನಡೆದ ನಡೆಯಲ್ಲವೂ ನಿನ್ನ ಪ್ರದಕ್ಷಿಣೆಯಾಗಲಿ, ನಾನು ಮಲಗಿದ್ದೆಲ್ಲವೂ ನಿನಗೆ ನಮಸ್ಕಾರವಾಗಲಿ, ನಾನು ಮಾಡುವ ಪ್ರತಿಯೊಂದು ಕರ್ಮವೂ ನಿನಗೆ ಪೂಜೆಯಾಗಲಿ ಎನ್ನುವ ಅನುಸಂಧಾನದಿಂದ ಬದುಕಿದಾಗ ಅದು ಯಜ್ಞವಾಗುತ್ತದೆ. ಇನ್ನು ಎರಡನೇ ಕರ್ಮ-ದಾನ. ನಮ್ಮಲ್ಲಿಲ್ಲದ್ದನ್ನು ನಾವು ಇನ್ನೊಬ್ಬರಿಗೆ ಕೊಡಲು ಸಾಧ್ಯವಿಲ್ಲ. ಆದರೆ ಯಾರಿಗೆ ಯಾವಾಗ ಯಾವುದರ ಅಗತ್ಯವಿದೆಯೋ, ಅದು ನಮ್ಮಲ್ಲಿದ್ದರೆ, ಅದನ್ನು ನಿಸ್ವಾರ್ಥವಾಗಿ, ಪ್ರಚಾರದ ಬಯಕೆ ಇಲ್ಲದೆ ಕೊಡುವುದು ದಾನ. ಮೂರನೆಯ ಕರ್ಮ-ತಪಸ್ಸು. ದೊಡ್ಡವರಿಗೆ ಗೌರವಕೊಡುವುದು, ಸ್ವಚ್ಛವಾಗಿರುವುದು, ಪ್ರಾಮಾಣಿಕವಾದ ನೇರ ನಡೆ, ಸ್ವಚ್ಛಂದಕಾಮಕ್ಕೆ ಕಡಿವಾಣ(ಬ್ರಹ್ಮಚರ್ಯ), ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು, ಇತ್ಯಾದಿ. ಇದು ನಾವು ದೈನಂದಿನ ಜೀವನದಲ್ಲಿ ಆಚರಿಸಬಹುದಾದ ತಪಸ್ಸು.[ಈ ಮೂರು ಕರ್ಮದ ಕುರಿತ ಹೆಚ್ಚಿನ ವಿವರಣೆಯನ್ನು ಗೀತೆಯ ಹದಿನೇಳನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. Refer: http://bhagavadgitakannada.blogspot.in].
ಮುಂದುವರಿದು ಯಮ ಹೇಳುತ್ತಾನೆ: “ತ್ರಿಣಾಚಿಕೇತಸ್ತ್ರಯಮೇತದ್ವಿದಿತ್ವಾ  ಯ ಏವಂ ವಿದ್ವಾಂಶ್ಚಿನುತೇ ನಾಚಿಕೇತಂ” ಎಂದು(ಶ್ಲೋ-೧೮-೧). ಅಗ್ನಿಕುಂಡ, ಕಾಲಕುಂಡ, ದೇಹಕುಂಡ ಎನ್ನುವ ಮೂರು ವಿಧವನ್ನು ತಿಳಿದು, ಮೂರು ಬಗೆಯ ನಾಚಿಕೇತಾಗ್ನಿಯ ಉಪಾಸನೆ ಮಾಡುವವನು, ಹಿಂದೆ ಹೇಳಿದ ರೀತಿಯಲ್ಲಿ ಮೂರು ವೇದಗಳನ್ನು ಸಮನ್ವಯಮಾಡಿ ಅರ್ಥ ಮಾಡಿಕೊಂಡು, ‘ತ್ರಿಕರ್ಮಕೃತ್’ ಆಗಿ, ಅಗ್ನಿಯಲ್ಲಿ ಸ್ಥಿತನಾದ ಅಗ್ನಿನಾರಾಯಣನನ್ನು ಉಪಾಸನೆ ಮಾಡಿದರೆ-ಅಂಥವನು ಮೊದಲು ಸ್ವರ್ಗವನ್ನು ಸೇರಿ, ಅಲ್ಲಿ ಕೆಲಕಾಲ ಇದ್ದು[ಶಾಸ್ತ್ರಕಾರರ ಪ್ರಕಾರ ಕೆಲಕಾಲ ಅಂದರೆ ಒಂದು ಮನ್ವಂತರದಷ್ಟು ದೀರ್ಘಕಾಲ], ಸ್ವರ್ಗಸುಖವನ್ನು ಅನುಭವಿಸಿ, ಆನಂತರ ಅಗ್ನಿಸ್ಥನಾದ ಭಗವಂತನನ್ನು ಉಪಾಸನೆ ಮಾಡಿದ ಫಲವಾಗಿ, ಹುಟ್ಟು-ಸಾವುಗಳ ಎಲ್ಲಾ ಬಂಧವನ್ನು ಕಳಚಿಕೊಂಡು, ನಿತ್ಯಾನಂದ ರೂಪವಾದ, ಸ್ವರೂಪಸುಖವನ್ನು ಕೊಡುವ ಮೋಕ್ಷವನ್ನು ಪಡೆಯುತ್ತಾನೆ.
“ಬ್ರಹ್ಮಜಜ್ಞಂ ದೇವಮೀಡ್ಯಂ ವಿದಿತ್ವಾ ನಿಚಾಯ್ಯೇಮಾಂ ಶಾಂತಿಮತ್ಯಂತಮೇತಿ”(ಶ್ಲೋ-೧೭-೨). ಇಲ್ಲಿ ಯಮ ಭಗವಂತನನ್ನು ‘ಬ್ರಹ್ಮಜಜ್ಞ’ ಎಂದು ಸಂಬೋಧಿಸಿದ್ದಾನೆ. ಶಬ್ದಗಳಲ್ಲಿ ಬೃಹತ್ ಆದದ್ದು ವೇದ. ಆದ್ದರಿಂದ ಅದು ‘ಬ್ರಹ್ಮ’. ವೇದಗಳಿಂದ ಅಭಿವ್ಯಕ್ತನಾಗುವ ಭಗವಂತ ‘ಬ್ರಹ್ಮಜ’. ಇಂಥ ಭಗವಂತ ವೇದವೇದ್ಯ. ಎಲ್ಲವನ್ನು ಬಲ್ಲವನು ಆ ಭಗವಂತನೊಬ್ಬನೆ. ಆದ್ದರಿಂದ ವೇದವೇದ್ಯನೂ ಸರ್ವಜ್ಞನೂ ಆದ  ಆ ಭಗವಂತ ‘ಬ್ರಹ್ಮಜಜ್ಞ’. ಆತನನ್ನು ಎಲ್ಲರೂ ಜಾತಿ ಮತ ಭೇದವಿಲ್ಲದೆ ‘ದೇವರು’ ಎಂದು ಕರೆಯುತ್ತಾರೆ. ಪ್ರಪಂಚದಲ್ಲಿ ಒಬ್ಬೊಬ್ಬರಿಗೆ ಒಂದೊಂದು ದೇವರಿಲ್ಲ. ಎಲ್ಲರಿಗೂ ದೇವರು ಒಬ್ಬನೆ. ಇದನ್ನು ‘ದೇವರು’ ಎನ್ನುವ ಪದವೇ ವಿವರಿಸುತ್ತದೆ. ದೇವರುಎನ್ನುವ ಪದ ದಿವುಎನ್ನುವ ದಾತುವಿನಿಂದ ಬಂದಿರುವುದು. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು. ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು.
೧) ಧ್ಯುತಿ: ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.
೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗೂ ಗೆಲುವಿನ ಸ್ವರೂಪ.
೩) ಕಾಂತಿ: ಕೇವಲ ಇಚ್ಛೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಛೆಯನ್ನು ಕೊಟ್ಟವ ಹಾಗೂ ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.
೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.
೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.
೬) ಕ್ರೀಡಾ: ಲೀಲಾ ಮಾತ್ರದಿಂದ ಸೃಷ್ಟಿ-ಸ್ಥಿತಿ-ಸಂಹಾರವನ್ನು ನಿಭಾಯಿಸುವವನು ಭಗವಂತ. ಇದು ಆತನಿಗೊಂದು ಕ್ರೀಡೆ.
೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು 'ದೇವ'
ಹೀಗೆ ಇಚ್ಛಾಮಾತ್ರದಿಂದ ಸೃಷ್ಟಿ ಮಾಡಬಲ್ಲ, ಸತ್ಯಸಂಕಲ್ಪ, ಸರ್ವಗತ, ಸರ್ವಜ್ಞ, ಬೆಳಕುಗಳ ಬೆಳಕಾಗಿ ಜಗತ್ತಿನ ಸರ್ವ ವ್ಯವಹಾರವನ್ನು ನಿರ್ವಹಿಸುವ, ಸರ್ವಶ್ರೇಷ್ಠ ಭಗವಂತ 'ದೇವ'. ಈ ರೀತಿ ಅಗ್ನಿಯಲ್ಲಿರುವ ಭಗವಂತನನ್ನು ‘ಬ್ರಹ್ಮಜಜ್ಞಂ ದೇವಮೀಡ್ಯ’ ಎಂದು ಉಪಾಸನೆ ಮಾಡಿದರೆ- ಸಾವಿಲ್ಲದ, ಸುಖದ ಪರಾಕಾಷ್ಠೆಯಾದ ಮೋಕ್ಷವನ್ನು ಪಡೆಯಬಹುದು ಎಂದು ವಿವರಿಸಿದ ಯಮ ಹೇಳುತ್ತಾನೆ: “ಇದೇ ನಿನ್ನ ಎರಡನೇ ಪ್ರಶ್ನೆಗೆ ಉತ್ತರ. ಎಲ್ಲವನ್ನು ಬಿಡಿಸಿ ಹೇಳಿದ್ದೇನೆ” ಎಂದು [ “ಏಷ ತೇSಗ್ನಿರ್ನಚಿಕೇತಃ ಸ್ವರ್ಗ್ಯೋ  ಯಮವೃಣೀಥಾ ದ್ವಿತೀಯೇನ ವರೇಣ (ಶ್ಲೋ-೧೯-೧)]
ಇಷ್ಟು ಹೇಳಿ ಯಮ ನಚಿಕೇತನನ್ನು ಉದ್ದೇಶಿಸಿ ಕೇಳುತ್ತಾನೆ- ನಾನು ಹೇಳಿದ ವಿಚಾರ ನಿನಗೆ ಸರಿಯಾಗಿ ತಿಳಿಯಿತೋ ಎಂದು. ಇದಕ್ಕೆ ಉತ್ತರಿಸಿದ ನಚಿಕೇತ ಯಮನಿಂದ ಪಡೆದ ಜ್ಞಾನದ ಉಪದೇಶವನ್ನು ಪೂರ್ಣವಾಗಿ ಅನುವಾದಿಸಿದ. ಈ ಸಂದರ್ಭವನ್ನು ಇಲ್ಲಿ ವಿವರಿಸುತ್ತಾ ಹೇಳುತ್ತಾರೆ:  “ಸ ಚಾಪಿ ತತ್ಪ್ರತ್ಯವದದ್ಯಥೋಕ್ತಂ  ಅಥಾಸ್ಯ ಮೃತ್ಯುಃ ಪುನರೇವಾಹ ತುಷ್ಟಃ”(ಶ್ಲೋ-೧೫-೨) ಎಂದು. ತಾನು ಹೇಳಿದ ಎಲ್ಲಾ ವಿಚಾರವನ್ನು ಚಾಚೂ ತಪ್ಪದೆ ನಚಿಕೇತ ಗ್ರಹಿಸಿದ್ದನ್ನು ಕಂಡು ಯಮನಿಗೆ ಮಹದಾನಂದವಾಗುತ್ತದೆ.  ಈ ಆನಂದದಲ್ಲಿ ಆತ ತಾನು ಮೊದಲು ಪ್ರತಿಜ್ಞೆ ಮಾಡಿದ್ದ ಮೂರು ವರವಲ್ಲದೆ ಇನ್ನೂ ಒಂದು ವರವನ್ನು ಕೊಡಲು ಮುಂದಾಗುತ್ತಾನೆ. ಇದನ್ನು ವರ್ಣಿಸುತ್ತಾ ಇಲ್ಲಿ ಹೇಳುತ್ತಾರೆ: “ತಮಬ್ರವೀತ್ ಪ್ರೀಯಮಾಣೋ ಮಹಾತ್ಮಾ  ವರಂ ತವೇಹಾದ್ಯ ದದಾಮಿ ಭೂಯಃ”(ಶ್ಲೋ-೧೬-೧) ಎಂದು.  ಸೂರ್ಯ-ಚಂದ್ರರಿಗೆ ಸಮಾನಸ್ಕಂದನಾದ, ದಿವ್ಯಜ್ಞಾನದ ಬೆಳಕನ್ನು ತುಂಬಿಕೊಂಡಿರುವ, ಮಹಾತ್ಮನಾದ ಯಮ ನಚಿಕೇತನ ಗ್ರಹಣ ಶಕ್ತಿಯನ್ನು ಕಂಡು ಸಂತೋಷಪಟ್ಟು ಇನ್ನೊಂದು ವರವನ್ನು ಅದೇ ಕ್ಷಣದಲ್ಲಿ ತಾನೇ ಉಡುಗೊರೆಯಾಗಿ ಕೊಡುತ್ತಾ ಹೇಳುತ್ತಾನೆ:  “ಈ ಅಗ್ನಿ ವಿದ್ಯೆಗೆ ಭೂಮಿಯ ಮೇಲೆ ನಾಚಿಕೇತಾಗ್ನಿ ಎಂದು ಹೆಸರು ಬರಲಿ; ನಿನ್ನ ಹೆಸರಿನಿಂದಲೇ ಈ ಅಗ್ನಿ ಪ್ರಸಿದ್ಧಿಯಾಗಲಿ” ಎಂದು. ಹೀಗೆ ಹೇಳಿ ಯಮ ತನ್ನ ಕೊರಳಿನಿಂದ ಒಂದು ಬಂಗಾರದ ಹಾರವನ್ನು ನಚಿಕೇತನಿಗೆ ಕೊಡಲು ಮುಂದಾಗುತ್ತಾನೆ. [ತವೈವ ನಾಮ್ನಾ ಭವಿತಾSಯಮಗ್ನಿಃ ಸೃಂಕಾಂ ಚೇಮಾಮನೇಕರೂಪಾಂ ಗೃಹಾಣ” (ಶ್ಲೋ-೧೬-೨)]. ಇಲ್ಲಿ ಬಂಗಾರದ ಹಾರವನ್ನು ‘ಸೃಂಕಾಂ’ ಎಂದು ಕರೆದಿದ್ದಾರೆ.  ಈ ಪದಕ್ಕೆ ಸಂಸ್ಕೃತದಲ್ಲಿ ‘ಸಂಕೋಲೆ’ ಎನ್ನುವ ಅರ್ಥವಿದೆ. ಇದು ಯಮ ನಚಿಕೇತನನ್ನು ಪರೀಕ್ಷಿಸುವ ರೀತಿ. ತನ್ನಿಂದ ಪ್ರಶಂಸೆ ಜೊತೆಗೆ ಚಿನ್ನದ ಹಾರ ದೊರೆತಾಗ, ನಚಿಕೇತ ಚಿನ್ನದ ಆಸೆಗೆ ಬಲಿಬೀಳುತ್ತಾನೋ ಎಂದು ಯಮ ನಚಿಕೇತನನ್ನು ಪರೀಕ್ಷಿಸುತ್ತಿದಾನೆ. ಇದಕ್ಕೆ ನಚಿಕೇತ ಹೇಳಿದನಂತೆ: “ಭೂಮಿ ಮೇಲೆ ಆರಾಧನೆ ಮಾಡತಕ್ಕ ಅಗ್ನಿವಿದ್ಯೆಗೆ ನನ್ನ ಹೆಸರು ಬಂತೆಂದರೆ ಅದು ನನ್ನ ಭಾಗ್ಯ. ಆದರೆ ಬಂಗಾರದ ಸರ ನನಗೆ ಬೇಡ.  ಅದು ನಿಮ್ಮಲ್ಲೇ ಇರಲಿ” ಎಂದು. [ನಚಿಕೇತನ ಈ ಪ್ರತಿಕ್ರಿಯೆಯನ್ನು ಕಠ ಉಪನಿಷತ್ತಿನಲ್ಲಿ ವಿವರಿಸಿಲ್ಲ]. ಇದು ಜ್ಞಾನಿಗಳಲ್ಲಿರುವ ದೊಡ್ಡ ಗುಣ. ಏಕೆಂದರೆ ಇಲ್ಲಿ ಯಮ ಕೊಟ್ಟಿದ್ದು ಸಂಸಾರ ಬಂಧದ ಸಂಕೋಲೆ ಎನ್ನುವ ಹಾರ. ಆದ್ದರಿಂದ ಅದನ್ನು ಜ್ಞಾನಿಯಾದ ನಚಿಕೇತ ಸ್ವೀಕಾರ ಮಾಡಲಿಲ್ಲ. ಆಗ ಯಮ ನಚಿಕೇತನಲ್ಲಿ ಹೇಳುತ್ತಾನೆ: “ನಿನ್ನ ಹೆಸರು ವೈದಿಕ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುವಂತೆ ನಿನಗೆ ವರವನ್ನು ಕೊಟ್ಟಿದ್ದೇನೆ. ಈಗ ನೀನು ನಿನ್ನ ಮೂರನೇ ವರವನ್ನು ಕೇಳು” ಎಂದು [ಏತಮಗ್ನಿಂ ತವೈವ ಪ್ರವಕ್ಷ್ಯಂತಿ ಜನಾಸಃ   ತೃತೀಯಂ ವರಂ ನಚಿಕೇತೋ ವೃಣೀಷ್ವ(ಶ್ಲೋ-೧೯-೨)]. ಮೂರನೇ ವರವಾಗಿ ನಚಿಕೇತ ಏನನ್ನು ಕೇಳಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.

Tuesday, April 10, 2012

Kathopanishad in Kannada Ch-01 Canto-01 Shloka-9-13


              ತಿಸ್ರೋ ರಾತ್ರೀರ್ಯದವಾತ್ಸೀರ್ಗೃಹೇ ಮೇSನಶ್ನನ್ ಬ್ರಹ್ಮನ್ನತಿಥಿರ್ನಮಸ್ಯಃ
              ನಮಸ್ತೇSಸ್ತು ಬ್ರಹ್ಮನ್ ಸ್ವಸ್ತಿ ಮೇSಸ್ತು  ತಸ್ಮಾತ್ಪ್ರತಿ ತ್ರೀನ್ವರಾನ್ವೃಣೀಷ್ವ                    

ತನಗಾಗಿ ಅನ್ನ-ನೀರನ್ನು ಬಿಟ್ಟು ಕಾಯುತ್ತಿದ್ದ ನಚಿಕೇತನನ್ನು ಕುರಿತು ಯಮ ಹೇಳುತ್ತಾನೆ: “ತಂದೆಯ ಅಣತಿಯಂತೆ ನನ್ನನ್ನು ಕಾಣಲು ಬಂದ ನೀನು ನನಗೆ ಅತಿಥಿ. ಹೀಗಿರುವಾಗ ಅತಿಥಿಯನ್ನು ಮೂರು ದಿನ  ಕಾಯಿಸಿದ ಪಾಪ ನನಗೆ ಬಂತು” ಎಂದು. “ನನ್ನ ಗೃಹದಲ್ಲಿ ನನ್ನ ಅತಿಥಿಯಾಗಿ ಉಪವಾಸ ಕುಳಿತ ನಮಸ್ಕಾರ ಯೋಗ್ಯ  ಜ್ಞಾನಿ ನೀನು, ನಮ್ಮಿಂದ ಅದೆಷ್ಟು ದೊಡ್ಡ ಅಪರಾಧವಾಗಿ ಹೋಗಿದೆ, ನಿನ್ನ ಕಾಲಿಗೆ ಬಿದ್ದು  ಕ್ಷಮೆ ಕೇಳಬೇಕು ನಾವು, ನಿನಗೆ ನನ್ನ ನಮಸ್ಕಾರ” ಎನ್ನುತ್ತಾನೆ ಯಮ. ಎಷ್ಟು ದೊಡ್ಡ ಮಾತು! ಪುಣ್ಯ ಪಾಪಗಳ ನಿರ್ಣಯ ಮಾಡಿ ಪಾಪಿಗಳಿಗೆ ದುಃಖವನ್ನೂ ಪುಣ್ಯಜೀವಿಗಳಿಗೆ ಸುಖವನ್ನೂ ಕೊಡುವ, ಲೋಕದ ಸುಖ-ದುಃಖಗಳ ನಿಯಾಮಕ ದೇವತೆ ಯಮ ಇಲ್ಲಿ  “ನನ್ನ ಅಪರಾಧವನ್ನು ಕ್ಷಮಿಸು, ನಿನಗೆ ನಮಸ್ಕಾರ” ಎನ್ನುತ್ತಿದ್ದಾನೆ. ಇದು ಹಿರಿಯರ ದೊಡ್ಡ ಗುಣ. ಶ್ರದ್ಧಾವಾನ್ ಲಭತೇ ಜ್ಞಾನಂ(೪-೩೯) ಎಂದು ಕೃಷ್ಣ ಗೀತೆಯಲ್ಲಿ ಹೇಳಿರುವಂತೆ-ಜ್ಞಾನಿಗಳಿಗೆ ಅಪಮಾನ ಮಾಡಿದರೆ ಅದು ಭಗವಂತನನ್ನು ಅಪಮಾನ ಮಾಡಿದಂತೆ. ಜ್ಞಾನಿಗಳು ಭಗವಂತನಿಗೆ ಪರಮ ಪ್ರೀಯರು. ಈ ಕಾರಣದಿಂದ ಜ್ಞಾನಿಯನ್ನು ಕಾಯಿಸಿದ್ದಕ್ಕೆ ಇಲ್ಲಿ ಯಮ ಕ್ಷಮೆ ಕೇಳುತ್ತಿದ್ದಾನೆ.   “ನನಗೆ ಅನಿಷ್ಟವಾಗದಂತೆ ಹರಸು; ಅಷ್ಟೇ ಅಲ್ಲ,  ನಿನ್ನನ್ನು ಮೂರು ದಿನ ಕಾಯಿಸಿದ್ದಕ್ಕೆ ನೀನು ಬಯಸಿದ ಮೂರು ವರವನ್ನು ಕೊಡುತ್ತೇನೆ –ಏನು ಬೇಕಾದರೂ ಕೇಳು” ಎನ್ನುತ್ತಾನೆ ಯಮ.   

              ಶಾಂತಸಂಕಲ್ಪಃ ಸುಮನಾ ಯಥಾ ಸ್ಯಾದ್ ವೀತಮನ್ಯುರ್ಗೌತಮೋ ಮಾSಭಿ ಮೃತ್ಯೋ
             ತ್ವತ್ಪ್ರಸೃಷ್ಟಂ ಮಾSಭಿವದೇತ್ಪ್ರತೀತ  ಏತತ್ ತ್ರಯಾಣಾಂ ಪ್ರಥಮಂ ವರಂ ವೃಣೇ        ೧೦

 ನಚಿಕೇತ ಯಮನಲ್ಲಿ ಕೇಳುವ ಮೊದಲ ವರವನ್ನು ಈ ಶ್ಲೋಕದಲ್ಲಿ ವರ್ಣಿಸಲಾಗಿದೆ. “ನಾನು ಪುನಃ ನನ್ನ ತಂದೆಗೆ ಮಗನಾಗಿ ಅದೇ ದೇಹದಲ್ಲಿ ಹುಟ್ಟಬೇಕು; ನನ್ನ ತಂದೆ ಸತ್ತು ಬದುಕಿದ ನನ್ನನ್ನು ಗುರುತಿಸಬೇಕು; ನನ್ನನ್ನು ನೋಡಿ ಸಂತೋಷಪಡಬೇಕು; ಒಳ್ಳೆಯ ಮಾತನ್ನಾಡಿ ಸ್ವಾಗತಿಸಬೇಕು; ನನ್ನ ತಂದೆಗೆ ‘ಕೆಟ್ಟದ್ದನ್ನು ಮಾಡುವ’ ಬಯಕೆ ಎಂದೂ ಬರಬಾರದು; ಆತನ ಮನಸ್ಸು ಸದಾ ಒಳ್ಳೆಯ ಕೆಲಸ ಮಾಡಲು ಚಡಪಡಿಸಬೇಕು ಮತ್ತು ಆತ ಎಂದೂ ಕೋಪ ಮಾಡಬಾರದು” ಎಂದು ನಚಿಕೇತ ಯಮನನ್ನು ಕೇಳುತ್ತಾನೆ. ಇದು ನಚಿಕೇತ ಕೇಳುವ ಮೊದಲ ವರ.
            
            ಯಥಾ ಪುರಸ್ತಾದ್ ಭವಿತಾ ಪ್ರತೀತಃ  ಔದ್ದಾಲಕಿರಾರುಣಿರ್ಮತ್ಪ್ರಸೃಷ್ಟಃ
             ಸುಖಂ ರಾತ್ರೀಃ ಶಯಿತಾ ವೀತಮನ್ಯುಃ  ತ್ವಾಂ ದದೃಶಿವಾನ್ ಮೃತ್ಯುಮುಖಾತ್ ಪ್ರಮುಕ್ತಂ ೧೧

ನಚಿಕೇತ ಕೇಳಿದ ವರವನ್ನು ಯಮ ಪುರಸ್ಕರಿಸುತ್ತಾನೆ ಮತ್ತು ಹೇಳುತ್ತಾನೆ: “ನೀನು ಹಿಂದಿರುಗಿ ಹೋದಾಗ  ನಿನ್ನ ತಂದೆ ನಿನ್ನನ್ನು ಅಷ್ಟೇ ಸ್ಪಷ್ಟವಾಗಿ ಗುರುತಿಸುತ್ತಾನೆ. ನಿನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಾನೆ. ಮರಳಿ ಹೋದ ನಿನ್ನನ್ನು ಕಂಡ ಮೇಲೆ ಆತನ ಕೋಪ ನಾಶವಾಗಿ ಆತ ಶಾಂತನಾಗುತ್ತಾನೆ ಮತ್ತು ಆತ ರಾತ್ರಿ ಸುಖ ನಿದ್ದೆಯನ್ನು ಪಡೆಯುತ್ತಾನೆ” ಎಂದು.
ಇಲ್ಲಿ ಉದ್ದಾಲಕನನ್ನು ಔದ್ದಾಲಕಿ ಆರುಣಿ ಎಂದು ಕರೆದಿದ್ದಾರೆ. ಔದ್ದಾಲಕಿ ಎಂದರೆ ಉದ್ದಾಲಕನ ಮೊಮ್ಮಗ. ಹಿಂದೆ ಅಜ್ಜನ ಹೆಸರನ್ನು ಮೊಮ್ಮೊಗನಿಗೆ ಇಡುವುದು ಸಂಪ್ರದಾಯವಾಗಿತ್ತು. ಇಲ್ಲಿ ಉದ್ದಾಲಕನ ತಾತನ ಹೆಸರೂ ಉದ್ದಾಲಕ ಎನ್ನುವುದನ್ನು ನಾವು ಗಮನಿಸಬೇಕು. ಅರುಣೆಯ ಮಗ ಹಾಗೂ ಉದ್ದಾಲಕನ ಮೊಮ್ಮಗನಾದ ನಚಿಕೇತನ ತಂದೆ- ಔದ್ದಾಲಕಿ ಆರುಣಿ. 

          ಸ್ವರ್ಗೇ ಲೋಕೇ ನ ಭಯಂ ಕಿಂಚನಾಸ್ತಿ   ನ ತತ್ರ ತ್ವಂ ನ ಜರಯಾ ಬಿಭೇತಿ
          ಉಭೇ ತೀರ್ತ್ವಾ ಅಶನಾಯಾಪಿಪಾಸೇ  ಶೋಕಾತಿಗೋ ಮೋದತೇ ಸ್ವರ್ಗಲೋಕೇ       ೧೨

         ಸ ತ್ವಮಗ್ನಿಂ ಸ್ವರ್ಗ್ಯಮಧ್ಯೇಷಿ ಮೃತ್ಯೋ  ಪ್ರಬ್ರೂಹಿ ತ್ವಂ ಶ್ರದ್ಧಧಾನಾಯ ಮಹ್ಯಂ
         ಸ್ವರ್ಗಲೋಕಾ ಅಮೃತತ್ವಂ ಭಜಂತ  ಏತದ್ ದ್ವಿತೀಯೇನ ವೃಣೇ ವರೇಣ                  ೧೩


ಇಲ್ಲಿ “ಸ್ವರ್ಗೇ ಲೋಕೇ ನ ಭಯಂ ಕಿಂಚನಾಸ್ತಿ” ಎನ್ನುವಲ್ಲಿ ಬಂದಿರುವ ‘ಸ್ವರ್ಗ ಲೋಕ’ ಅಂದರೆ ದೇವತೆಗಳಿರುವ ದೇವೇಂದ್ರನ ಲೋಕವಲ್ಲ. ಏಕೆಂದರೆ ಇಲ್ಲಿ  ‘ನ ಭಯಂ ಕಿಂಚನಾಸ್ತಿ’ ಎಂದಿದ್ದಾರೆ. ಅಂದರೆ ಇದು ಯಾವ ಭಯವೂ ಇಲ್ಲದ ಸ್ವರ್ಗಲೋಕ. ದೇವೇಂದ್ರನ ಲೋಕ ಕೇವಲ ತಾತ್ಕಾಲಿಕ ಸುಖವನ್ನು ಅನುಭವಿಸಿ ಭೂಮಿಗೆ ಮರಳುವ ಲೋಕ. ಅಲ್ಲಿ ದೇವತೆಗಳಿಗೂ ಕೂಡ ಪತನದ ಭಯವಿದೆ. ಆದ್ದರಿಂದ ಇಲ್ಲಿ ಹೇಳುವ ಸ್ವರ್ಗಲೋಕ-ಭಗವಂತನ ಲೋಕವಾದ ಮೋಕ್ಷ.  ಮೋಕ್ಷದಲ್ಲಿ ಮೃತ್ಯುವಿನ ಭಯವಿಲ್ಲ, ಜರಾ-ವ್ಯಾಧಿಯ ಭಯವಿಲ್ಲ [ನ ತತ್ರ ತ್ವಂ ನ ಜರಯಾ ಬಿಭೇತಿ]. ಸಹಜವಾಗಿ ಸ್ವರ್ಗ=ಸ್ವ+ರ+ಗ. ಇಲ್ಲಿ ‘ಸ್ವಃ’ ಅಂದರೆ ಎಲ್ಲಾ ಸ್ವರಗಳಿಂದ ವಾಚ್ಯನಾದ ಭಗವಂತನ ರೂಪ. ಸ್ವರಃ ಅಂದರೆ-ಸ್ವಯಮೇವ ರಮತಿ ಇತಿ ಸ್ವರಃ. ಸ್ವಯಂ ಆನಂದಸ್ವರೂಪನಾದ ಭಗವಂತ. ಆತನ ಆನಂದಕ್ಕೆ ಇನ್ನೊಂದು ಸಾಧನ ಅಥವಾ ಅಧಿಷ್ಠಾನ ಬೇಡ. ಇಂಥಹ ಭಗವಂತ ಎಲ್ಲಿ ಸದಾ ಗತನಾಗಿದ್ದಾನೋ [ಸದಾ ವ್ಯಕ್ತನಾಗಿರುತ್ತಾನೋ] ಅದು ಸ್ವರ್ಗಲೋಕ. ಅಂದರೆ ಮುಕ್ತಸ್ಥಾನ. ಇನ್ನೊಂದು ರೀತಿಯಲ್ಲಿ ಈ ಪದವನ್ನು ಬಿಡಿಸಿದರೆ ಸು+ವ+ರ್ಗ=ಸ್ವರ್ಗ. ಇಲ್ಲಿ ಸುವಃ ಅಂದರೆ ಜ್ಞಾನಾನಂದಸ್ವರೂಪನಾದ ಭಗವಂತ. [ಈ ವಿವರಣೆ ಗಾಯತ್ರಿಯಲ್ಲಿದೆ]. ಅಂತಹ ಭಗವಂತ ಗತನಾದ ಲೋಕ ಸ್ವರ್ಗಲೋಕ-ಅದು ಮೋಕ್ಷ ಸ್ಥಾನ. ಈ ಹಿನ್ನೆಲೆಯನ್ನು ತಿಳಿದು ಈ ಶ್ಲೋಕವನ್ನು ವಿಶ್ಲೇಷಿಸೋಣ.

ಯಮನ ಅನುಗ್ರಹಕ್ಕೆ ಪಾತ್ರನಾದ ನಚಿಕೇತ ಮುಂದುವರಿದು ಹೇಳುತ್ತಾನೆ: “ಮೋಕ್ಷದಲ್ಲಿ ಸಾವಿನ ಭಯವಿಲ್ಲ. ಅಲ್ಲಿ ಹುಟ್ಟು ಸಾವಿನ ನಡುವಿನ ತರಂಗಗಳಾದ ಶೋಕ, ಮೋಹ, ಹಸಿವು, ಬಾಯಾರಿಕೆ, ಮುಪ್ಪು, ರೋಗ ಯಾವುದೂ ಇಲ್ಲದೆ ಎಲ್ಲರೂ ಆನಂದವಾಗಿರುತ್ತಾರೆ ಎಂದು ಕೇಳಿದ್ದೇನೆ. ಸ್ವರ್ಗ ಲೋಕಕ್ಕೆ ಹೋಗಿ ಅಲ್ಲಿಂದ ವೈಕುಂಠಕ್ಕೆ ಹೋಗಬೇಕಾದರೆ ಸ್ವರ್ಗ ನಿಯಾಮಕನಾದ ಮತ್ತು ಅಗ್ನಿಸ್ಥನಾದ ಭಗವಂತನನ್ನು ತಿಳಿದುಕೊಳ್ಳಬೇಕು ಎನ್ನುವ ವಿಚಾರ ಗೊತ್ತಿದೆ. ನೀನು ಮೊಕ್ಷಪ್ರದನಾದ ನಾರಾಯಣನನ್ನು ಉಪಾಸನೆ ಮಾಡಿದ್ದೀಯ. ಈ ಅಗ್ನಿಸ್ಥನಾದ ಭಗವಂತನನ್ನು ನಾನು ಹೇಗೆ ಉಪಾಸನೆ ಮಾಡಬೇಕು-ಅದನ್ನು ಹೇಳು. ನನಗೆ ಶ್ರದ್ಧೆ ಇದೆ. ನಾನು ಶ್ರದ್ಧೆಯಿಂದ ಕೇಳುತ್ತಿದ್ದೇನೆ. ಭಗವಂತನೆಂಬ ಅಮೃತತ್ವವನ್ನು ಉಪಾಸನೆ ಮಾಡಿ, ಸ್ವರ್ಗವನ್ನು ಸೇರಿ ಅಲ್ಲಿ ಸ್ವಲ್ಪ ಕಾಲ ಇದ್ದು, ಆಮೇಲೆ ವೈಕುಂಠವನ್ನು ಸೇರುತ್ತಾರೆ ಎನ್ನುವುದನ್ನು ತಿಳಿದವರು ಹೇಳುತ್ತಾರೆ. ಮೋಕ್ಷ ಸಾಧನೆಗಾಗಿ ಉಪಾಸನೆ ಮಾಡಬೇಕಾದ ಭಗವಂತನನ್ನು ಅಗ್ನಿ ಮುಖದಲ್ಲೇ ಏಕೆ ಉಪಾಸನೆ ಮಾಡಬೇಕು ಮತ್ತು ಹೇಗೆ ಮಾಡಬೇಕು. ಅಗ್ನಿಮುಖದಲ್ಲಿ ಆರಾಧನೆ ಮಾಡುವ, ಅದರ ಹಿಂದಿನ ವಿಜ್ಞಾನ ಮತ್ತು ಉಪಾಸನೆಯ ರಹಸ್ಯವನ್ನು ನನಗೆ ಹೇಳು” ಎಂದು ನಚಿಕೇತ ತನ್ನ ಎರಡನೇ ವರವನ್ನು ಯಮನಲ್ಲಿ ಕೇಳುತ್ತಾನೆ.  
ಇಲ್ಲಿ ನಚಿಕೇತ ‘ನನಗೆ ಶ್ರದ್ಧೆ ಇದೆ, ನಾನು ಶ್ರದ್ಧೆಯಿಂದ ಕೇಳುತ್ತಿದ್ದೇನೆ’ ಎಂದಿದ್ದಾನೆ.  ಸಂಸ್ಕೃತದಲ್ಲಿ ‘ಶ್ರದ್ಧಾ’ ಎನ್ನುವ ಶಬ್ದಕ್ಕೆ ಅಪೂರ್ವವಾದ ಅರ್ಥವಿದೆ. ‘ಶ್ರತ್’ ಎಂದರೆ ಆಸ್ತಿಕ್ಯ. ಆಸ್ತಿಕ್ಯ ಅಂದರೆ ನಮಗೆ ಗೊತ್ತಿಲ್ಲದ, ನಾವು ಕಾಣದ ಸತ್ಯವೂ ಇದೆ ಅನ್ನುವುದನ್ನು ನಂಬುವುದು. ನಮಗೆ ಯಾವುದು ಗೊತ್ತಿಲ್ಲವೋ, ನಾವು ಯಾವುದನ್ನು ಕಾಣಲಿಲ್ಲವೋ ಅದೂ ಕೂಡ ಈ ಬ್ರಹ್ಮಾಂಡದಲ್ಲಿದೆ, ಇಲ್ಲಿ ನಾವು ಕಂಡದಷ್ಟೇ ಇರುವುದಲ್ಲ ಅನ್ನುವ ನಂಬಿಕೆ ಆಸ್ತಿಕ್ಯ. ಇಂಥಹ ಆಸ್ತಿಕ್ಯವನ್ನು ಹೊಂದಿರುವುದು ಶ್ರದ್ಧಾ. ಶ್ರದ್ಧೆ ಉಳ್ಳವರು ಪರಲೋಕವನ್ನು, ಭಗವಂತನನ್ನು ಎಂದೂ ನಿರಾಕರಣೆ ಮಾಡುವುದಿಲ್ಲ.
ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಇಲ್ಲಿ ಅಗ್ನಿಯ ಪ್ರತೀಕದಲ್ಲಿ ಭಗವಂತನ ಆರಾಧನೆಯ ಕುರಿತು ವಿಶೇಷವಾಗಿ ನಚಿಕೇತ ಏಕೆ ಪ್ರಶ್ನೆ ಮಾಡಿದ ಎನ್ನುವುದನ್ನು ಒಮ್ಮೆ ವಿಶ್ಲೇಷಿಸೋಣ. ವೇದದಲ್ಲಿ ಭಗವಂತನ ಆರಾನೆಗೆ ಅತ್ಯಂತ ಮುಖ್ಯವಾದ ಪ್ರತೀಕ ಅಗ್ನಿ ಎನ್ನುತ್ತಾರೆ. ಅಗ್ನಿ ಎಂದೂ ಅಪವಿತ್ರವಲ್ಲ. ಅಗ್ನಿ ಸ್ಪರ್ಶದಿಂದ ಅಪವಿತ್ರ ಕೂಡಾ ಪವಿತ್ರವಾಗುತ್ತದೆ. ನಮಗೆ ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎನ್ನುವ ಅಭಿಲಾಷೆ ಇದ್ದರೆ ಅದನ್ನು ಕೇವಲ ಅಗ್ನಿ ಮುಖೇನ ಅರ್ಪಿಸಬೇಕು. ನಮ್ಮ ಕಣ್ಣ ಮುಂದೆ ಇರುವ ಎಲ್ಲಾ ಪ್ರತೀಕಗಳಲ್ಲಿ ಅಗ್ನಿ ಅತ್ಯಂತ ಶ್ರೇಷ್ಠ ಎನ್ನುವುದು ವೇದ ಕಾಲದ ಋಷಿಗಳ ತೀರ್ಮಾನ. ಸುಡುವ ಅಗ್ನಿಯಲ್ಲಿ ಅಗ್ನಿದೇವ, ಅವನೊಳಗೆ ಪ್ರಾಣ, ಪ್ರಾಣನೊಳಗೆ  ಭಗವಂತ. ಈ ಅನುಸಂಧಾನದಲ್ಲಿ ಅಗ್ನಿಮುಖದಲ್ಲಿ ಮಾಡುವ ಪೂಜೆ ಯಜ್ಞ. ಇದು ಯಜ್ಞ ನಾಮಕ ಭಗವಂತನನ್ನು, ಯಜ್ಞದಿಂದ, ಜ್ಞಾನ-ಭಕ್ತಿ-ವೈರಾಗ್ಯದಿಂದ ಕೂಡಿದ ಉತ್ಕೃಷ್ಟವಾದ ಆಹ್ವಾನದಿಂದ ಮಾಡುವ ಆರಾನೆ. ಬದುಕಿದ್ದಷ್ಟು ಕಾಲ ಭಗವಂತನನ್ನು ಅಗ್ನಿ ಮುಖದಲ್ಲಿ ಆರಾಧನೆ ಮಾಡುವುದು ನಮ್ಮ ಪ್ರಾಚೀನ ಸಂಪ್ರದಾಯವಾಗಿತ್ತು. ಒಟ್ಟಿನಲ್ಲಿ  ಭಗವಂತನನ್ನು ಅಗ್ನಿ ಪ್ರತೀಕದಲ್ಲಿ ಆರಾಧನೆ ಮಾಡುವುದು ಬಹಳ ಶ್ರೇಷ್ಠ.  ಇಲ್ಲಿ ನಚಿಕೇತನಿಗೆ ಭೂಸ್ತರದಲ್ಲಿ ಅಗ್ನಿಹೋತ್ರದ ಮಹತ್ವ ತಿಳಿದಿತ್ತು. ಅದಕ್ಕಾಗಿ ಆತ ಅದರ ಹಿಂದಿನ ವಿಜ್ಞಾನವನ್ನು, ಅಗ್ನಿಮುಖದಲ್ಲಿ ಭಗವಂತನ ಉಪಾಸನೆ ಮಾಡುವ ಪೂರ್ಣ ರಹಸ್ಯವನ್ನು ಹೇಳಿಕೊಡು ಎಂದು ವರಕೇಳಿದ.
ನಾವು ಯಾವ ಕ್ರಿಯೆಯನ್ನು ಮಾಡುವುದಾದರೂ ತಿಳಿದು ಮಾಡುವುದು ಬಹಳ ಮುಖ್ಯ. ಸಾಮಾನ್ಯವಾಗಿ ಇಂದು ನಮ್ಮ ಮನೆಗಳಲ್ಲಿ ನಡೆಯುವ ಧಾರ್ಮಿಕ ಕ್ರಿಯೆಗಳನ್ನು ನೋಡಿದರೆ ಅಲ್ಲಿ ತಿಳುವಳಿಕೆ ಇದ್ದು ಮಾಡುವವರು ತುಂಬಾ ವಿರಳ. ತಿಳಿಯದೆ ಮಾಡುವ ಕ್ರಿಯೆ ಮೂಢತನವಾಗಿರುವ ಸಾಧ್ಯತೆ ಬಹಳ ಹೆಚ್ಚು.  ತಿಳಿಯದೆ ಹಿಂದಿನವರು ಮಾಡಿಕೊಂಡು ಬಂದ ಸಂಪ್ರದಾಯ ಎಂದು ಕಣ್ಮುಚ್ಚಿ ನಡೆಸಿಕೊಂಡು ಬರುವುದರ ಅಪಾಯವನ್ನು ಒಂದು ಕಥೆಯಲ್ಲಿ ಈ ರೀತಿ ವರ್ಣಿಸಿದ್ದಾರೆ:  ಒಂದು ಊರಿನಲ್ಲಿ ಒಬ್ಬ ಯುವಕನಿದ್ದ. ಆತನ ತಂದೆ ಒಮ್ಮೆ ತಮ್ಮ  ಹಿರಿಯರ ಶ್ರಾದ್ಧ ಮಾಡುತ್ತಿದ್ದರು. ಆ ಸಮಯದಲ್ಲಿ ಮನೆಯಲ್ಲಿದ್ದ ಬೆಕ್ಕು ಅಲ್ಲಿ-ಇಲ್ಲಿ ಬಂದು ತೊಂದರೆ ಕೊಡುತ್ತಿತ್ತು. ಇದನ್ನು ಗಮನಿಸಿದ ಅವರು ಆ ಬೆಕ್ಕನ್ನು ಕಟ್ಟಿ ಹಾಕುವಂತೆ ಮನೆಯವರಿಗೆ ಹೇಳುತ್ತಾರೆ. ಈ ರೀತಿ ಅವರು ಬೆಕ್ಕನ್ನು ಕಟ್ಟಿಹಾಕಿ ಶ್ರಾದ್ಧ ಮಾಡುತ್ತಾರೆ. ಕಾಲಕ್ರಮೇಣ ಯುವಕ ದೊಡ್ಡವನಾದ ಹಾಗೂ ಒಂದು ದಿನ ಆತ ತನ್ನ ತಂದೆಯ ಶ್ರಾದ್ಧ ಮಾಡಬೇಕಾಗಿ ಬಂತು. ಆಗ ಅವರ ಮನೆಯಲ್ಲಿ ಬೆಕ್ಕು ಇರಲಿಲ್ಲ. ಅದಕ್ಕಾಗಿ ಆತ ಎಲ್ಲಿಂದಲೋ ಒಂದು ಬೆಕ್ಕನ್ನು ತಂದು ಕಟ್ಟಿಹಾಕಿಕೊಂಡು ಶ್ರಾದ್ಧ ಮಾಡುತ್ತಾನೆ. ಆತನಿಗೆ ತನ್ನ ತಂದೆ ಏಕೆ ಬೆಕ್ಕನ್ನು ಕಟ್ಟಿ ಹಾಕಿದ್ದರು ಎನ್ನುವುದು ತಿಳಿದಿರಲಿಲ್ಲ. ಆತ ತಿಳಿದುಕೊಂಡಿದ್ದದ್ದು ‘ಶ್ರಾದ್ಧ ಮಾಡಬೇಕಾದರೆ ಬೆಕ್ಕನ್ನು ಕಟ್ಟಿಹಾಕಬೇಕು’ ಎಂದು!.  ಇಂದು ನಮ್ಮ ಪ್ರತಿಯೊಂದು ಆಚರಣೆಯಲ್ಲಿ ಇಂತಹ ಮೂಢನಂಬಿಕೆಗಳು ತುಂಬಿಹೋಗಿವೆ. ಇದಕ್ಕಾಗಿ ಹಿಂದಿನವರು ಮಾಡಿದ್ದನ್ನು ಏಕೆ-ಏನು ಎಂದು ಗೊತ್ತಿಲ್ಲದೆ ಮಾಡಬಾರದು. ಪ್ರತಿಯೊಂದು ಕ್ರಿಯೆಯ ಹಿಂದಿನ ವೈಶಿಷ್ಟ್ಯವನ್ನು ತಿಳಿದು ಮಾಡುವುದು ಬಹಳ ಮುಖ್ಯ. ಈ ಕಾರಣದಿಂದಲೇ ನಚಿಕೇತನ ಪ್ರಶ್ನೆಯನ್ನು ಕೇಳಿ ಯಮನಿಗೆ ಬಹಳ ಸಂತೋಷವಾಯಿತು. ಚಿಕ್ಕ ಹುಡುಗನಾದರೂ ಆತ ತಾನು ತಿಳಿದು ಮಾಡಬೇಕು ಮತ್ತು ಜಗತ್ತಿಗೆ ತಿಳಿಸಬೇಕು ಎನ್ನುವ ಆಸೆಯಿಂದ ಕೇಳಿದ್ದರಿಂದ ಯಮ  ಸಂತೋಷದಿಂದ ಆತನ ಪ್ರಶ್ನೆಗೆ ಉತ್ತರಿಸುತ್ತಾನೆ.         

Saturday, April 7, 2012

Kathopanishad in Kannada Ch-01 Canto-01 Shloka-5-8


              ಬಹೂನಾಮೇಮಿ ಪ್ರಥಮೋ  ಬಹೂನಾಮೇಮಿ ಮಧ್ಯಮಃ
              ಕಿಂ ಸ್ವಿದ್ಯಮಸ್ಯ ಕರ್ತವ್ಯಂ ಯನ್ಮಯಾSದ್ಯ ಕರಿಷ್ಯತಿ        


“ನಿನ್ನನ್ನು ಮೃತ್ಯುವಿಗೆ ದಾನ ಮಾಡಿದ್ದೇನೆ-ಅಲ್ಲಿಗೆ ಹೋಗು” ಎನ್ನುವ ತಂದೆಯ ಕೋಪದ ಮಾತನ್ನು ನಚಿಕೇತ ಆದೇಶವಾಗಿ ಸ್ವೀಕರಿಸಿ, ಸ್ಥೂಲ ದೇಹವನ್ನು ತೊರೆದು ಪರಲೋಕದತ್ತ ತನ್ನ ಸೂಕ್ಷ್ಮಶರೀರದ ಮೂಲಕ ಪಯಣಿಸುತ್ತಾನೆ. ಹೀಗೆ ಸಾಗುವಾಗ ಆತನ ಹಿಂದೆ ಆತನ ನಂತರ ಸತ್ತವರು ಹಾಗೂ ಆತನಿಗಿಂತ  ಮುಂದೆ ಆತನಿಗಿಂತ ಮೊದಲು ಸತ್ತ ಜೀವಗಳ ಪ್ರವಾಹವೇ ಸಾಗುತ್ತಿತ್ತು. ಆತನ ಹಿಂದಿರುವ ಜೀವಗಳ ಮುಂದಾಳಾಗಿ, ಆತನಿಗಿಂತ ಮುಂದಿರುವ ಜೀವಗಳ ಗುಂಪಿನಲ್ಲಿ ಒಬ್ಬನಾಗಿ ನಚಿಕೇತ ಪರಲೋಕದತ್ತ ತೆರಳುತ್ತಿದ್ದ. ಹೀಗೆ ಸಾಗುತ್ತಿದ್ದ ಆತನಿಗೆ ತನ್ನ ತಂದೆಯ ಮೇಲೆ ಯಾವುದೇ ಕೊಪವಿರಲಿಲ್ಲ. ತಾನು ಚಿಕ್ಕ ವಯಸ್ಸಿನಲ್ಲೇ ಸಾಯಬೇಕಾಗಿ ಬಂತಲ್ಲಾ ಎನ್ನುವ ದುಃಖವೂ ಇರಲಿಲ್ಲ. ಆದರೆ ತಂದೆ ನನ್ನನ್ನು ಯಮನಿಗೆ ದಾನವಾಗಿ ಕೊಟ್ಟು ಈ ದಾನವನ್ನೂ ವ್ಯರ್ಥ ಮಾಡಿದನಲ್ಲ ಎನ್ನುವ ಬೇಸರವಿತ್ತು. ಏಕೆಂದರೆ ಒಂದು ವೇಳೆ ಇನ್ಯಾರಿಗೋ ದಾನ ಮಾಡುತ್ತಿದ್ದರೆ ನಚಿಕೇತ ಅವರ ಸೇವೆ ಮಾಡಿಕೊಂಡು ಬದುಕುತಿದ್ದ ಮತ್ತು ಅದರ ಪುಣ್ಯ ತಂದೆಗೆ ಸೇರುತ್ತಿತ್ತು. ಆದರೆ ಇಲ್ಲಿ ಯಮನಿಗೆ ದಾನ ಮಾಡಿರುವುದರಿಂದ- ಯಮನಿಗೆ ತನ್ನಿಂದ ಯಾವ ಉಪಯೋಗವೂ ಇಲ್ಲ, ಆದ್ದರಿಂದ ಈ ದಾನವೂ ವ್ಯರ್ಥವಾಯಿತಲ್ಲ ಎನ್ನುವುದು ಆತನ ಚಿಂತನೆ.

ಅನುಪಶ್ಯ ಯಥಾ ಪೂರ್ವೇ ಪ್ರತಿಪಶ್ಯ ತಥಾSಪರೇ
ಸಸ್ಯಮಿವ ಮರ್ತ್ಯಃ ಪಚ್ಯತೇ ಸಸ್ಯಮಿವಾಜಾಯತೇ ಪುನಃ               

ಯಮಲೋಕದತ್ತ ಸಾಗುತ್ತಿರುವ ನಚಿಕೇತ ಯಮಧೂತರ ಮಾತುಗಳನ್ನೂ ಕೇಳಿಸಿಕೊಳ್ಳುತ್ತಾನೆ. ಅವರು ಹೇಳುತ್ತಾರೆ: ಪಾಪಿಗಳು ಯಮಲೋಕದಲ್ಲಿ ಯಾವ ರೀತಿ ಯಾತನೆ ಅನುಭವಿಸುತ್ತಾರೆ ಅನ್ನುವುದನ್ನು ಅನುಭವಿಸಿ ನೋಡು” ಎಂದು. “ಹಿಂದೆ ಬಂದವರು ಅನುಭವಿಸಿದ್ದೂ ಇದನ್ನೇ, ಮುಂದೆ ಬರುವವರು ಅನುಭವಿಸುವುದೂ ಇದನ್ನೆ. ಸಸ್ಯವನ್ನು(ತರಕಾರಿಯನ್ನು) ಹೇಗೆ ಪಾತ್ರೆಯಲ್ಲಿ ಹಾಕಿ ಕುದಿಸುತ್ತಾರೆ, ಹಾಗೆ ಪಾಪಿಗಳನ್ನು ನರಕದ ಕುಂಡದಲ್ಲಿ ಕುದಿಸುತ್ತಾರೆ. ಅವರು ಈ ರೀತಿ ದುಃಖದಲ್ಲಿ ಬೆಂದು, ದುಃಖವನ್ನು ಅನುಭವಿಸಿ ಪಕ್ವವಾಗಿ ಪುನಃ ಭೂಮಿಯಲ್ಲಿ ಹುಟ್ಟುತ್ತಾರೆ”.

ವೈಶ್ವಾನರಃ ಪ್ರವಿಶತ್ಯತಿಥಿರ್ಬ್ರಾಹ್ಮಣೋ ಗೃಹಾನ್
ತಸ್ಯೈತಾಂ  ಶಾಂತಿಂ ಕುರ್ವಂತಿ ಹರ ವೈವಸ್ವತೋದಕಂ                

ಹಿಂದೆ ಹೇಳಿದಂತೆ ಯಮಲೋಕವನ್ನು ತಲುಪಿದ ನಚಿಕೇತನಿಗೆ ತಕ್ಷಣ ಯಮನ ದರ್ಶನ ಆಗುವುದಿಲ್ಲ. ಜ್ಞಾನಿಯಾದ ನಚಿಕೇತನನ್ನು ಯಮನ ಪತ್ನಿ ಉಪಚರಿಸುತ್ತಾಳೆ. ಆದರೆ ನಚಿಕೇತ ಯಮನ ದರ್ಶನ ಆಗುವ ತನಕ ಯಾವುದೇ ಆಹಾರವನ್ನು ಸ್ವೀಕರಿಸುವುದಿಲ್ಲ. ಈ ರೀತಿ ಕಾಯುತ್ತಿರುವಾಗ ಯಮನ ಆಗಮನವಾಗುತ್ತದೆ. ಹೀಗೆ ಬಂದ ಯಮನಲ್ಲಿ ಯಮನ ಪತ್ನಿ ಹೇಳುತ್ತಾಳೆ: “ಹಸಿದು ಬಂದ ಒಬ್ಬ ಬ್ರಹ್ಮ ಜ್ಞಾನಿ ನಮ್ಮ ಮನೆ ಮುಂದೆ ಉಪವಾಸ ಕೂತಿದ್ದಾನೆ. ತನ್ನ ಹೊಟ್ಟೆಯಲ್ಲಿ ವೈಶ್ವಾನರ(ಬೆಂಕಿ, ಅಗ್ನಿ ನಾರಾಯಣ)ನನ್ನು ಹೊತ್ತು ಬಂದಿರುವ ಅತಿಥಿಯ ಹಸಿವನ್ನು ಮೊದಲು ಹಿಂಗಿಸು. ಇಲ್ಲದಿದ್ದರೆ ನಮ್ಮ ಇಡೀ ದೇವಲೋಕ ಬಸ್ಮವಾದೀತು” ಎಂದು. ಇಲ್ಲಿ ಅತಿಥಿ ಎಂದರೆ ಆಕಸ್ಮಿಕವಾಗಿ ಹಸಿದು ಆಹಾರ ಬಯಸಿ ಬರುವವರು. ಇವರಿಗೆ ತಿಥಿ(ದಿನಾಂಕ ಅಥವಾ ಸಮಯ) ಇಲ್ಲ. [ನಾವು ಕರೆದಾಗ ಬರುವವರು, ನೆಂಟರಿಷ್ಟರು  ಅತಿಥಿಗಳಲ್ಲ-ಅವರು ಅಭ್ಯಾಗತರು]. ಹಿಂದೆ ಇಂದಿನ ರೀತಿ ವಸತಿಗೃಹ, ಉಪಹಾರ ಗೃಹಗಳಿರಲಿಲ್ಲ. ಪ್ರತಿಯೊಂದು ಮನೆಯಲ್ಲಿ ಹಸಿದು ಬರುವವನಿಗೆ ಅನ್ನ-ನೀರು ಕೊಡುವ ಅದ್ಭುತ ಸಂಪ್ರದಾಯ ಈ ದೇಶದಲ್ಲಿತ್ತು. ಶಾಸ್ತ್ರಕಾರರ ಪ್ರಕಾರ  ಯಾರೇ ಹಸಿದವರು ಬಂದರೂ ನಾವು ಅವರ ಹೊಟ್ಟೆ ತಣಿಸದೆ ಕಳುಹಿಸಬಾರದು. ಅವನ ಕುಲ-ಗೋತ್ರ ಯಾವುದೂ ಇಲ್ಲಿ ಪ್ರಮುಖವಲ್ಲ, ಹಸಿದು ಬಂದವ ಅತಿಥಿ ಅಷ್ಟೇ. “ಹಸಿದು ಬಂದವನ ಹಸಿವನ್ನು ತಣಿಸದಿದ್ದರೆ ಆತನ ಹೊಟ್ಟೆಯಲ್ಲಿನ ಬೆಂಕಿ ನಿನ್ನ ಮನೆಯನ್ನು ಸುಡುತ್ತದೆ” ಎನ್ನುವುದು ನಮ್ಮ ಪ್ರಾಚೀನರು ಕಂಡುಕೊಂಡ ಸತ್ಯವಾಗಿತ್ತು. ಅತಿಥಿ ರೂಪದಲ್ಲಿ ಭಗವಂತ ಬೆಂಕಿಯಾಗಿ ಮನೆಗೆ ಬಂದಾಗ ಮೊದಲು ಮೂರು ಬಗೆಯ ನೀರನ್ನು ಕೊಟ್ಟು ಬೆಂಕಿಯನ್ನು ಶಾಂತಗೊಳಿಸಬೇಕು. ಕೈ ತೊಳೆಯುವ ನೀರು-ಅರ್ಗ್ಯ, ಕಾಲು ತೊಳೆಯುವ ನೀರು-ಪಾದ್ಯ ಮತ್ತು ಕುಡಿಯುವ ನೀರು-ಆಚಮನ. ಇಲ್ಲಿ ಒಬ್ಬ ಜ್ಞಾನಿ ಅತಿಥಿಯಾಗಿ ಬಂದು ಯಮನಿಗಾಗಿ ಕಾದು ಕುಳಿತಿದ್ದಾನೆ. ಅದಕ್ಕಾಗಿ ಯಮನ ಹೆಂಡತಿ ಕಾದು ಕುಳಿತಿರುವ ಅತಿಥಿಯ ಸತ್ಕಾರ ಮಾಡಿ ಆತನ ಹೊಟ್ಟೆಯಲ್ಲಿನ ಅಗ್ನಿಯನ್ನು ತಣಿಸು” ಎಂದು ವಿವಸ್ವತನ(ಸೂರ್ಯನ) ಮಗನಾದ ಯಮನಿಗೆ ಹೇಳುತ್ತಾಳೆ.[ಕೆಲವು ಅನುವಾದಕಾರರು ಈ ಮಾತನ್ನು ಯಮನ ಮಂತ್ರಿಗಳು ಹೇಳಿದರು ಎಂದು ಬರೆಯುತ್ತಾರೆ. ಆದರೆ ಹಿಂದೆ ಹೇಳಿದಂತೆ ನಾವು ಮಹಾಭಾರತ, ತೈತ್ತಿರೀಯ ಬ್ರಾಹ್ಮಣ ಮತ್ತು ಪುರಾಣದಲ್ಲಿ ಬರುವ ನಚಿಕೇತನ ಕಥೆಯನ್ನು ಸಮಷ್ಟಿಯಾಗಿ ನೋಡಿದಾಗ- ಈ ಮಾತನ್ನು ಯಮನ ಪತ್ನಿ-ಶ್ಯಾಮಲ ಹೇಳಿರುವುದು ಸ್ಪಷ್ಟವಾಗುತ್ತದೆ].
     
            ಆಶಾಪ್ರತೀಕ್ಷೇ ಸಂಗತಂ ಸೂನೃತಾಂ   ಚೇಷ್ಟಾಪೂರ್ತೇ ಪುತ್ರಪಶೂಂಶ್ಚ ಸರ್ವಾನ್
           ಏತದ್ವೃಂಕ್ತೇ ಪುರುಷಸ್ಯಾಲ್ಪಮೇಧಸೋ   ಯಸ್ಯಾನಶ್ನನ್ ವಸತಿ ಬ್ರಾಹ್ಮಣೋ ಗೃಹೇ   

ಹಸಿದು ಬಂದ ಅತಿಥಿಯನ್ನು ಸತ್ಕರಿಸದೆ ತಿರಸ್ಕರಿಸುವುದರ ಪರಿಣಾಮ ಏನು ಎನ್ನುವುದನ್ನು ಈ ಶ್ಲೋಕದಲ್ಲಿ ಯಮನ ಪತ್ನಿ ವಿವರಿಸುತ್ತಾಳೆ. “ಒಂದು ವೇಳೆ ಅತಿಥಿಯನ್ನು ಬೈದು ಕಳುಹಿಸಿದರೆ ನಿಮ್ಮ ಆಶಾ ಪ್ರತೀಕ್ಷಗಳು ಮಣ್ಣುಪಾಲಾಗುತ್ತವೆ, ಗೆಳೆಯರು ನಿಮ್ಮಿಂದ ದೂರವಾಗುತ್ತಾರೆ, ಯಾರೂ ನಿನ್ನನ್ನು ನೋಡಿ ಒಳ್ಳೆಯ ಮಾತನಾಡುವುದಿಲ್ಲ. ನಿಮ್ಮ ಇಷ್ಟಾ-ಪೂರ್ತಾ-ಸರ್ವಸ್ವವೂ ನಾಶವಾಗುತ್ತದೆ” ಎನ್ನುತ್ತಾಳೆ ಆಕೆ. ಇಲ್ಲಿ ‘ಇಷ್ಟಾ’ ಎಂದರೆ ನಮ್ಮ ಬೆಳವಣಿಗೆಗಾಗಿ ನಾವು ಮಾಡುವ ಕ್ರಿಯೆ ಮತ್ತು ‘ಪೂರ್ತಾ’ ಎಂದರೆ ಸಮಾಜದ ಋಣವನ್ನು ತೀರಿಸುವುದಕ್ಕೊಸ್ಕರ ಮಾಡುವ ಕ್ರಿಯೆ. ಒಟ್ಟು ಆರು ಇಷ್ಟಗಳು ಹಾಗೂ ಆರು ಪೂರ್ತಗಳನ್ನು ಶಾಸ್ತ್ರಕಾರರು ಪಟ್ಟಿ ಮಾಡಿದ್ದಾರೆ.  “ಅಗ್ನಿಹೋತ್ರಂ ತಪಃ ಸತ್ಯಂ ವೇದಾನಾಂಚಾನುಪಾಲನಂ ಆತಿಥ್ಯಂ ವೈಶ್ವಾದೇವಂ ಚ ಇಷ್ಟಂ ಇತಿ ಅಭಿಧೀಯತೆ” – (೧) ನಿತ್ಯ ಅಗ್ನಿ ಮುಖದಲ್ಲಿ ಆರಾಧನೆ(ಅಗ್ನಿಹೋತ್ರ), (೨) ಉಪವಾಸ, ಬ್ರಹ್ಮಚರ್ಯ, ಇತ್ಯಾದಿ ನೈಷ್ಠಿಕ ಜೀವನ ಬದುಕುವುದು(ತಪಃ), (೩) ಪ್ರಾಮಾಣಿಕವಾದ ಬದುಕು(ಸತ್ಯ), (೪) ನಿರಂತರ ವೇದಾಧ್ಯಯನ ಹಾಗೂ ವೇದೋಕ್ತ ಕರ್ಮಾನುಷ್ಠಾನ, (೫) ಹಸಿದವರಿಗೆ ಅನ್ನ ನೀಡಿ ಸತ್ಕರಿಸುವುದು(ಆತಿಥ್ಯ), (೬) ದೇವತೆಗಳ ಆತಿಥ್ಯ –ಇವು ಆರು ಇಷ್ಟಗಳು.  ಹಾಗೆ (೧) ಸಮಾಜದ ಉಪಯೋಗಕ್ಕಾಗಿ  ಬಾವಿ ತೊಡಿಸುವುದು, (೨) ಇಳಿಬಾವಿಯನ್ನು ಕಟ್ಟುವುದು, (೩) ಸ್ನಾನದ ಕೆರೆಯನ್ನು ಕಟ್ಟುವುದು, (೪) ಊರಿನ ಕ್ಷೇಮಕ್ಕೋಸ್ಕರ ದೇವಸ್ಥಾನ ಕಟ್ಟುವುದು, (೫) ಸಾರ್ವಜನಿಕ ಅನ್ನದಾನ ಮತ್ತು (೬) ಗಿಡ ಮರಗಳನ್ನು ಬೆಳೆಸುವುದು- ಇವು ಆರು ಪೂರ್ತಗಳು. ಇಲ್ಲಿ ಯಮನ ಪತ್ನಿ ಹೇಳುತ್ತಾಳೆ: “ಒಂದು ವೇಳೆ ಅತಿಥಿಯನ್ನು ತಿರಸ್ಕರಿಸಿದರೆ ಅದರಿಂದ ಇಷ್ಟಾ ಮತ್ತು ಪೂರ್ತಾದ ಎಲ್ಲಾ ಪುಣ್ಯ ಫಲಗಳೂ ನಷ್ಟವಾಗುತ್ತದೆ” ಎಂದು.